ಬೆಂಗಳೂರು : ಕೆಜಿಗಟ್ಟಲೇ ಚಿನ್ನ, ಕೈ ತುಂಬಾ ಹಣ ಕೊಟ್ಟು ಅದ್ದೂರಿ ಮದುವೆ ಮಾಡಿದರೂ ಸಂತೃಪ್ತನಾಗದ ಕಾಂಟ್ರ್ಯಾಕ್ಟರ್ವೊಬ್ಬನ ಮಗ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದ. ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ನ್ಯಾಯಕ್ಕಾಗಿ ರಾಜಧಾನಿಯ ಪೂರ್ವ ವಿಭಾಗದ ಶಿವಾಜಿನಗರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಮಾರತಹಳ್ಳಿ ನಿವಾಸಿ 28 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಪ್ರತಿಷ್ಠಿತ ಕಂಪನಿಯಲ್ಲಿ ಕಂಪನಿ ಎಕ್ಸಿಕ್ಯೂಟಿವ್ ಆಗಿರುವ ಪತಿ ಬಾಲಾಜಿ(32) ಸೇರಿ ನಾಲ್ವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
2020 ನವೆಂಬರ್ನಲ್ಲಿ ದೂರುದಾರ ಮಹಿಳೆಯನ್ನು ಬಾಲಾಜಿ ವಿವಾಹವಾಗಿದ್ದ. ಬಾಲಾಜಿ ತಂದೆ ಕಲ್ಯಾಣನಗರದಲ್ಲಿ ಖ್ಯಾತ ಕಾಂಟ್ರ್ಯಾಕ್ಟರ್ ಆಗಿದ್ದಾರೆ. ಮಾವನ ಮನೆಯಲ್ಲಿ ಮಗಳು ಸುಖವಾಗಿ ಇರಲಿ ಎಂದುಕೊಂಡ ಮಹಿಳೆಯ ಪೋಷಕರು 2 ಕೆಜಿ ಚಿನ್ನದ ಆಭಾರಣ, 5 ಕೆಜಿ ಬೆಳ್ಳಿ, ಕೈ ತುಂಬ ಹಣ ಕೊಟ್ಟು, 20 ಲಕ್ಷ ರೂ. ಖರ್ಚು ಮಾಡಿ ವಿವಾಹ ಮಾಡಿದ್ದರು.
ವಿವಾಹವಾದ 1 ತಿಂಗಳ ಬಳಿಕ ಪತಿ ಮತ್ತೆ 1 ಕೋಟಿ ರೂ. ವರದಕ್ಷಿಣೆಗೆ ಬೇಡಿಕೆಯಿಟ್ಟು, ಪತ್ನಿಗೆ ಕಿರುಕುಳ ಕೊಡಲು ಕೂಡ ಪ್ರಾರಂಭಿಸಿದ್ದ. ಮಹಿಳೆಯ ಪಾಲಕರು ಸಾಲ ಮಾಡಿ 80 ಲಕ್ಷ ರೂ. ಹಣ ಕೊಟ್ಟಿದ್ದರು. ಮನೆ ಕಟ್ಟಲು ಬಾಕಿ 20 ಲಕ್ಷ ರೂ. ಕ್ಯಾಶ್ ತರುವಂತೆ ಪತಿ ಪೀಡಿಸುತ್ತಿದ್ದ. ನಂತರ ಪತ್ನಿ ನಿರಾಕರಿಸಿದಾಗ ಹಲ್ಲೆ ನಡೆಸಿ, ದೈಹಿಕ ಕಿರುಕುಳ ಕೊಟ್ಟು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.
ಜನವರಿಯಲ್ಲಿ ಪೊಂಗಲ್ ಹಬ್ಬಕ್ಕೆ ತವರಿನಿಂದ ದುಡ್ಡು ತರಲಿಲ್ಲವೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದ. ಪತ್ನಿ ಹೋಗಿ ಪೋಷಕರ ಬಳಿ ಅಳಲನ್ನು ತೋಡಿಕೊಂಡಿದ್ದಳು. ಮದುವೆಗೆ ಮಾಡಿದ ಸಾಲವನ್ನೇ ಇನ್ನೂ ತೀರಿಸದ ಹಿನ್ನೆಲೆಯಲ್ಲಿ ಇನ್ನೂ ಹಣವಿರಲಿಲ್ಲ. ಸಂಬಂಧಿಕರ ಒತ್ತಾಯದ ಮೇರೆಗೆ ಪತ್ನಿಯನ್ನು ಮನೆಗೆ ಸೇರಿಸಿದ ಪತಿ ಬಾಲಾಜಿ, ರೂಮ್ನಲ್ಲಿ ಕೂಡಿ ಹಾಕಿ ಆಹಾರ ನೀಡದೆ ಹಿಂಸಿಸುತ್ತಿದ್ದ ಎಂದು ದೂರಲಾಗಿದೆ.
ಮಗಳ ಪರಿಸ್ಥಿತಿ ಕಂಡು ಪೋಷಕರು ಮತ್ತೆ 30 ಲಕ್ಷ ರೂ. ಕೊಟ್ಟಿದ್ದರು. ಕೆಲ ಸಮಯ ಸುಮ್ಮನಿದ್ದ ಪತಿರಾಯ ಮತ್ತೆ ಹಳೇ ಚಾಳಿ ಮುಂದುವರೆಸಿದ್ದ. ಚಿನ್ನಾಭರಣ, ವರದಕ್ಷಿಣೆ ಹಣ ತೆಗೆದುಕೊಂಡು ವಿಚ್ಛೇದನ ಕೊಡುವಂತೆ ಪತ್ನಿಗೆ ಪೀಡಿಸುತ್ತಿದ್ದ. ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಬಾಲಾಜಿಗೆ ನೋಟಿಸ್ ನೀಡಿ ಶಿವಾಜಿನಗರ ಮಹಿಳಾ ಠಾಣೆಯ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.