ಬೆಂಗಳೂರು: ಕೋವಿಡ್ ತಂದ ಅವಾಂತರದಿಂದ ನಷ್ಟ ಎದುರಿಸಲಾಗದೆ ಬಸ್ ನಿಲ್ದಾಣಗಳಲ್ಲಿದ್ದ ಅಂಗಡಿ ಮುಂಗಟ್ಟು, ಮಳಿಗೆಗಳು ಹಾಗೂ ಹೋಟೆಲ್ಗಳನ್ನು ಮಾಲೀಕರು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ.
ಮೆಜೆಸ್ಟಿಕ್, ಶಾಂತಿನಗರದ ಬಸ್ ನಿಲ್ದಾಣಗಳು ಜನ ಸಂಚಾರವಿಲ್ಲದೆ ಭಣಗುಡುತ್ತಿವೆ. ಕೋವಿಡ್ ಬಂದ ನಂತರ ಗ್ರಾಹಕರೇ ಇಲ್ಲ. ಲಾಕ್ಡೌನ್ ತೆರವಾದ ಮೇಲೂ ಪ್ರಯಾಣಿಕರಿಲ್ಲದ ಕಾರಣ ಶೇ 5 ರಷ್ಟೂ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಮಳಿಗೆ ಬಂದ್ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.
ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿದ್ದ ಅಂಗಡಿ, ಮಳಿಗೆ, ಹೋಟೆಲ್ಗಳು ಬಾಗಿಲು ಮುಚ್ಚಿವೆ. ಈ ಹಿಂದೆ ಎರಡು ತಿಂಗಳ ಬಾಡಿಗೆ ಮನ್ನಾ ಮಾಡಿದ್ದರು. ಆದರೆ ನಂತರ ಎಷ್ಟೇ ಮನವಿ ಮಾಡಿದರೂ ಸರ್ಕಾರ, ಸಾರಿಗೆ ಇಲಾಖೆ ಸ್ಪಂದಿಸಿಲ್ಲ. ಹೀಗಾಗಿ ಅಂಗಡಿ ಮುಚ್ಚುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಕದಂಬ ಹೋಟೆಲ್ನ ಮಾಲೀಕ ಎಮ್.ವಿ ರಾಘವೇಂದ್ರ ಹೇಳುತ್ತಾರೆ.
ಭದ್ರತಾ ಠೇವಣಿ ವಾಪಸ್ಸು ಕೊಟ್ಟರೆ ಈಗಲೂ ಖಾಲಿ ಮಾಡಲು ಸಿದ್ಧ ಅಥವಾ ಡಿಸೆಂಬರ್ವರೆಗೆ ಬಾಡಿಗೆ ಮನ್ನಾ ಮಾಡಿ ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಸಾಲ ಮಾಡಿದ್ದೇವೆ. ಸಿಬ್ಬಂದಿಗಳಿಗೆ ವೇತನ ಕೊಡಲೂ ಸಾಧ್ಯವಿಲ್ಲ. ಹೊಟೇಲ್ಗಳಿಗೆ ಲಕ್ಷಾಂತರ ವೆಚ್ಚ ಮಾಡಿ ಡಿಸೈನ್ ಮಾಡಿದ್ದೇವೆ. ಆ ಖರ್ಚೂ ಕೂಡಾ ವಾಪಸ್ಸು ಸಿಗುತ್ತಿಲ್ಲ. ಸರ್ಕಾರ ನೆರವಿಗೆ ಬರುವವರೆಗೂ ತಾತ್ಕಾಲಿಕವಾಗಿ ಮುಚ್ಚುತ್ತೇವೆ ಎಂದು ಹೊಟೇಲ್ ಮಾಲೀಕ ದಯಾನಂದ್ ತಿಳಿಸಿದ್ದಾರೆ.