ಬೆಂಗಳೂರು: ನಗರದ ಕೆ.ಆರ್ ಮಾರುಕಟ್ಟೆಯ ಕ್ರಿಯಾ ಯೋಜನೆ ಅನುಸಾರ ಪರವಾನಗಿ ಪಡೆದ ಮಳಿಗೆಗಳಿಗೆ ಮಾತ್ರವೇ ಅವಕಾಶ ಇರಬೇಕು. ಇಲ್ಲದಿದ್ದರೆ ಅನಧಿಕೃತ ಮಳಿಗೆಗಳನ್ನು ತೆರವು ಮಾಡಲು ಆದೇಶಿಸಬೇಕಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಎಚ್ಚರಿಸಿದೆ.
ಕೆ.ಆರ್. ಮಾರುಕಟ್ಟೆ ಸಂಕೀರ್ಣದ ಅಗ್ನಿ ಅವಘಡ ತುರ್ತು ನಿರ್ಗಮನದ ಸ್ಥಳ ಮತ್ತು ಸಾರ್ವಜನಿಕ ಪಡಸಾಲೆಯಲ್ಲಿ ಅಕ್ರಮ ಮಳಿಗೆಗಳನ್ನು ನಿರ್ಮಿಸಿ ಹಂಚಲಾಗುತ್ತಿದೆ ಎಂದು ಆಕ್ಷೇಪಿಸಿ ಬೆಂಗಳೂರು ಹೂ ವ್ಯಾಪಾರಿಗಳ ಸಂಘವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರು, 1,285 ಮಳಿಗೆಗಳಿಗೆ ನಕ್ಷೆ ಮಂಜೂರಾಗಿವೆ. 24 ಅನಧಿಕೃತ ಮಳಿಗೆಗಳಿವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಾರ್ವಜನಿಕರ ಅನಧಿಕೃತ ಮಳಿಗೆಯಾದರೆ ಒಡೆದು ಹಾಕುತ್ತೀರಿ. ಆದರೆ ಬಿಬಿಎಂಪಿಯದ್ದಾದರೆ ಯಾಕೆ ತೆರವುಗೊಳಿಸುವುದಿಲ್ಲ. ಬಿಬಿಎಂಪಿಗೆ ಒಂದು ನ್ಯಾಯ, ಸಾರ್ವಜನಿಕರಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿತು. ಅಲ್ಲದೆ ವಿಚಾರಣೆ ಮುಂದೂಡಿಕೆ ಮಾಡಿತು.