ಬೆಂಗಳೂರು: ಆಸ್ತಿ ಖಾತೆ ಕೋರಿ ಸಲ್ಲಿಸಿರುವ ಅರ್ಜಿಗಳ ಸ್ವೀಕೃತಿ ಮತ್ತು ಅವುಗಳ ಸ್ಥಿತಿಗತಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಬಂಧಿತ ನಗರ ಸಭೆಗಳು ಆನ್ಲೈನ್ನಲ್ಲಿ (ವೆಬ್ ಹೋಸ್ಟಿಂಗ್) ದಾಖಲಿಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಖಾತೆ/ಡಿಜಿಟಲ್ ಖಾತಾ ಕೋರಿ ಬೀದರ್ ಖಾದಿ ಗ್ರಾಮೋದ್ಯೋಗ ಸಂಘವು ನಗರಸಭೆಗೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ವಿಫಲವಾಗಿದ್ದ ಬೀದರ್ ನಗರಸಭೆಯ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ನೇತೃತ್ವದ ಕಲಬುರಗಿ ಪೀಠ ಈ ಆದೇಶ ನೀಡಿದೆ.
ಖಾತೆಗಾಗಿ ಸಲ್ಲಿಸಿರುವ ಕುರಿತು ಎಲ್ಲಾ ಸಂಬಂಧಿತ ನಗರಸಭೆಗಳು (ಸಿಟಿ ಮುನ್ಸಿಪಲ್ ಕೌನ್ಸಿಲ್) ತಮ್ಮ ವೆಬ್ಸೈಟ್ನಲ್ಲಿ ವೆಬ್ ಹೋಸ್ಟ್ ಮಾಡಬೇಕು ಎಂದು ಸೂಚನೆ ನೀಡಿದೆ. ಜತೆಗೆ, ಸಾರ್ವಜನಿಕರು ಭೌತಿಕ ಅಥವಾ ಡಿಜಿಟಲ್ ಮಾದರಿಯಲ್ಲಿ ಖಾತೆ ಕೋರಿ ಅರ್ಜಿ ಸಲ್ಲಿಸಿದಾಗ ಅದನ್ನು ಕರ್ನಾಟಕ ಸಕಾಲ ಸೇವೆಗಳ ಕಾಯಿದೆ 2011ರ ಅಡಿ 30 ದಿನಗಳ ಒಳಗೆ ಪರಿಗಣಿಸಬೇಕು.
ಅಷ್ಟೇ ಅಲ್ಲದೆ ಖಾತೆ ಮಾಡಿಕೊಡುವಂತೆ ಕೋರಿ ಭೌತಿಕ ಅಥವಾ ಡಿಜಿಟಲ್ ಮಾದರಿಯಲ್ಲಿ ಸಲ್ಲಿಸುವ ಅರ್ಜಿಗಳ ಮಾಹಿತಿ, ಅರ್ಜಿ ಸ್ವೀಕರಿಸಿದ ದಿನಾಂಕ, ಆ ಅರ್ಜಿಗೆ ಸಂಬಂಧಿಸಿದಂತೆ ಏನೆಲ್ಲಾ ಬೆಳವಣಿಗೆಯಾಗಿದೆ ಎಂಬ ಮಾಹಿತಿಯನ್ನು ರಾಜ್ಯದಾದ್ಯಂತ ಇರುವ ಸಂಬಂಧಿತ ನಗರಸಭೆಗಳು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಲು ಅಗತ್ಯವಾದ ವೆಬ್ಹೋಸ್ಟ್ ಮಾಡುವ ವ್ಯವಸ್ಥೆಯನ್ನು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಪೌರಾಡಳಿತ ಇಲಾಖೆಯ ನಿರ್ದೇಶಕರು ರೂಪಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಖಾತೆಗೆ ಸಂಬಂಧಿಸಿದ ಸ್ವೀಕೃತಿ, ಅದರಲ್ಲಿ ಬೆಳವಣಿಗೆಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್ ಹೋಸ್ಟ್ ಮಾಡುವ ವ್ಯವಸ್ಥೆಯ ಜಾರಿಗೆ ರಾಜ್ಯ ಸರ್ಕಾರವು ಸೆಪ್ಟೆಂಬರ್ 26ರಂದು ಒಂದು ತಿಂಗಳ ಕಾಲಾವಕಾಶ ಕೋರಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಅನುಪಾಲನೆಗಾಗಿ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ನಿಗದಿಪಡಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಆಸ್ತಿ ದಾಖಲೆಗಾಗಿ ಡಿಜಿಟಲ್ ವ್ಯವಸ್ಥೆ: ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ಹಳೆಯ ಆಸ್ತಿಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಗೆ ಅಳವಡಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಬೆಂಗಳೂರಿನ ಪದ್ಮನಗರದ ಅಸ್ಲಾಂ ಪಾಷಾ ಅವರು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ (ಸ್ಯಾಂಕ್ಷನ್ ಪ್ಲಾನ್) ಸಲ್ಲಿಸಿಲ್ಲ, ಹೀಗಾಗಿ ಕಟ್ಟಡ ನಿರ್ಮಾಣ ಅಕ್ರಮ ಎಂದು ಬಿಬಿಎಂಪಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಸೂಚನೆ ನೀಡಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯ ಆಸ್ತಿ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಗೆ ಅಳವಡಿಸಲು ಹೈಕೋರ್ಟ್ ಸೂಚನೆ