ಬೆಂಗಳೂರು: ಬಾರ್, ಪಬ್ಗಳಿಂದ ತೊಂದರೆಯಾಗುತ್ತಿದೆ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಗರದಲ್ಲಿ ಪರವಾನಗಿ ಪಡೆಯದೆ ನಡೆಯುತ್ತಿರುವ ಕಾರ್ಯಾಚರಿಸುತ್ತಿರುವ ಪಬ್, ಬಾರ್ಗಳನ್ನು ಮುಚ್ಚಲು ಆದೇಶಿಸಿದೆ.
ಮಧ್ಯರಾತ್ರಿಯಲ್ಲಿ ಮನೆಗಳ ಮುಂದೆ ಯುವಕ-ಯುವತಿಯರ ಅನುಚಿತ ವರ್ತನೆ, ಪಬ್, ಬಾರ್ ಮತ್ತು ರೂಫ್ಟಾಪ್ಗಳ ಅತಿಯಾದ ಧ್ವನಿವರ್ಧಕದಿಂದ ನಮಗೆ ತೊಂದರೆಯಾಗುತ್ತಿದೆ ಎಂದು ನಗರದ ಕೋರಮಂಗಲ, ಇಂದಿರಾನಗರ, ಮತ್ತು ದೊಮ್ಮಲೂರು ನಿವಾಸಿಗಳು ಅನೇಕ ಬಾರಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಶಬ್ದ ಮಾಲಿನ್ಯ ಮಾಪಕಗಳನ್ನು ಖರೀದಿಸಿ, ಮಾಲಿನ್ಯ ನಿಯಂತ್ರಿಸಲಾಗುವುದು ಎಂದು ಪೊಲೀಸ್ ಇಲಾಖೆಯೂ ಹೇಳಿತ್ತು. ಆದರೆ ಜನರಿಗೆ ಉಂಟಾಗುತ್ತಿದ್ದ ಕಿರಿಕಿರಿ ಮಾತ್ರ ಕಡಿಮೆಯಾಗಿರಲಿಲ್ಲ. ಆದ್ದರಿಂದ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇದುವರೆಗೆ ಯಾಕೆ ಶಬ್ದ ಮಾಲಿನ್ಯ ಮಾಪಕಗಳನ್ನು ಖರೀದಿಸಿಲ್ಲ ಎಂದು ಪೊಲೀಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಮಾಲಿನ್ಯ ಮಾಪಕಗಳ ಖರೀದಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಮತ್ತು ನಗರದಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ತಲೆ ಎತ್ತಿರುವ ಪಬ್ ಮತ್ತು ಬಾರ್ಗಳ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದೆ.