ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮುಂದಿನ ನಡೆ ಮೇಲೆ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಅವಲಂಬಿತವಾಗಿದೆ ಎಂದು ಜೆಡಿಎಸ್ನ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಪರಿಸ್ಥಿತಿ ಏನಿದೆ ಎಂಬುದು ಗೊತ್ತಿದೆ. ಬಿಎಸ್ವೈ ಮುಂದೆ ಏನು ಮಾಡುತ್ತಾರೆ ಎಂಬುದನ್ನು ನೋಡಿಕೊಂಡು ಹೀಗೆ ಮಾಡುತ್ತಿದ್ದಾರೆ. ಈ ಹಿಂದೆ ಅವರು ಬೇರೆ ಪಕ್ಷ ಕಟ್ಟಿದ್ದ ದಿನದ ಲೆಕ್ಕಾಚಾರವನ್ನು ಕಾಂಗ್ರೆಸ್ ನಾಯಕರು ಹಾಕಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದಿರುವ ಆಂತರಿಕ ವರದಿ ನೋಡಿದ್ದೇನೆ. ಆ ವರದಿಯಲ್ಲಿ ಮೂರು ರೀತಿಯ ಪ್ರತಿಕ್ರಿಯೆ ಇದೆ. ಕಾಂಗ್ರೆಸ್ ನಾಯಕರ ಪರಿಸ್ಥತಿ ಏನಿದೆ ಎಂಬುದು ಗೊತ್ತಿದೆ ಎಂದು ಟೀಕಿಸಿದರು.
ನಾವು ಒಂದು ಸ್ಥಾನ ಇಲ್ಲದೇ ಇದ್ದಾಗಲೂ ನಾವು ಗೆದ್ದಿದ್ದೇವೆ. ವಿಧಾನ ಪರಿಷತ್ ಚುನಾವಣೆ ಬೇರೆ, ವಿಧಾನಸಭೆ ಚುನಾವಣೆ ಬೇರೆ. ಅವರು ಆಂತರಿಕ ಸಮೀಕ್ಷೆ ಮಾಡಲಿ. ನಮಗೆ ಯಾವುದೇ ಆತಂಕ ಇಲ್ಲ. ನಾವು ನಮ್ಮ ಗುರಿ ಮುಟ್ಟುತ್ತೇವೆ. ಕಾಂಗ್ರೆಸ್ನವರ ಆಂತರಿಕ ಸಮೀಕ್ಷೆ ಬಗ್ಗೆ ಮಾತನಾಡಲ್ಲ. ಅವರ ಒಳ ಒಪ್ಪಂದ ರಾಜ್ಯಸಭೆಯಲ್ಲಿ ಆಯ್ತು. 'ಬಿ' ಟೀಂ ಅನ್ನುವುದು ಯಾರು ಅಂತ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರ ಹಿಡಿಯಬೇಕೆಂದು ದೊಡ್ಡ-ದೊಡ್ಡ ಸರ್ವೇ ಮಾಡುವ ಕಂಪನಿ ಜೊತೆ ಸೇರಿ ತಿರುಚುವ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಪರಿಸ್ಥಿತಿ ಬಗ್ಗೆ ನೀವೇ (ಮಾಧ್ಯಮಗಳೇ) ಹೇಳುತ್ತಿದ್ದೀರಿ. ನಮಗೆ ಯಾವುದೇ ಆತಂಕ ಇಲ್ಲ. ನಮ್ಮ ಗುರಿಮುಟ್ಟಲೇ ಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನತೆ ವಿಶ್ವಾಸದಲ್ಲಿ ಸ್ವತಂತ್ರ ಸರ್ಕಾರ ತರಬೇಕೆಂದು ನಾವು ಹೊರಟಿದ್ದೇವೆ ಎಂದು ಹೇಳಿದರು.
ಮುಳುಗಿಹೋದ ಹಡಗಿನಲ್ಲಿ ಹೋದರೆ ಏನು ಪ್ರಯೋಜನ?: ಜೆಡಿಎಸ್ ಶಾಸಕರು ಸಿದ್ದರಾಮಯ್ಯನವರ ಸಂಪರ್ಕದಲ್ಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಅವರ ವಿಶ್ವಾಸದಲ್ಲಿ ಇರಬಹುದು. ಆದರೆ, ಅವರಲ್ಲೇ ಗೊಂದಲ ಇದೆ. ಆಷಾಢ ಮಾಸದ ನಂತರ ಅದು ಹೊರ ಬರುತ್ತದೆ. ದೇಶದಲ್ಲಿ ಮುಳುಗಿಹೋದ ಹಡಗಿನಲ್ಲಿ ಹೋದರೆ ಏನು ಪ್ರಯೋಜನ ಎಂದು ವ್ಯಂಗ್ಯವಾಡಿದರು.
ನಾನು ವಾಸ್ತವಾಂಶ ಹೇಳುತ್ತಿದ್ದೇನೆ. 123 ರ ನಮ್ಮ ಗುರಿಯಲ್ಲಿ ಹಲವಾರು ಸಮಸ್ಯೆ, ಅಡೆತಡೆಗಳಿವೆ. ಇಲ್ಲ ಅಂತ ಹೇಳಲ್ಲ. ನಮ್ಮ ಗುರಿ ತಲುಪುವ ಕಡೆ ಗಮನಹರಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ ಎಸಿಬಿ ಗೆ ಕೋರ್ಟ್ ಚಾಟಿ ಬೀಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿಯಿಂದಾಗಲಿ ನಡೆದ ದಾಳಿ ಪ್ರಯೋಜನವಿಲ್ಲ. ಸಾವಿರಾರು ದಾಳಿ ಆಗಿದೆ. ಎಷ್ಟು ಜನರ ಮೇಲೆ ಕ್ರಮ ಆಗಿದೆ ಹೇಳಿ?. ರಾಜ್ಯದ ಗೌರವಾನ್ವಿತ ನ್ಯಾಯಾಲಯದಲ್ಲಿ ಎಸಿಬಿ ಮುಖ್ಯಸ್ಥರೇ ಭ್ರಷ್ಟರು ಅಂತ ಹೇಳಿದ್ದಾರೆ. ಇದಕ್ಕಿಂತ ನಾಚಿಕೆಪಡುವ ಪ್ರಸಂಗ ಮತ್ತೊಂದಿಲ್ಲ ಎಂದರು.
ಸಿದ್ದರಾಮಯ್ಯನವರು ಸಿಎಂ ಆದಾಗ ಒಬ್ಬ ಐಎಎಸ್ ಅಧಿಕಾರಿ ಮನೆ ಮೇಲೆ ದಾಳಿಯಾಗಿ 5 ಕೋಟಿ ರೂ. ವಶಪಡಿಸಿಕೊಳ್ಳಲಾಯಿತು. ಆ ಅಧಿಕಾರಿಯನ್ನು ಮನೆಗೆ ಕಳುಹಿಸಿದರಾ, ಉನ್ನತ ಹುದ್ದೆ ಕೊಟ್ಟರು. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಜನತೆ ಮುಂದೆ ಇಡುತ್ತೇವೆ. ಲೋಕಾಯುಕ್ತ, ಎಸಿಬಿ ಮುಚ್ಚಿ ಎಂದು ಹೇಳಲ್ಲ. ಆದರೆ, ಪ್ರಾಮಾಣಿಕ ಅಧಿಕಾರಿಗಳು ಇರಬೇಕಷ್ಟೆ. ಯಾರ ಹಸ್ತಕ್ಷೇಪ ಇಲ್ಲದಂತೆ ಅಧಿಕಾರ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಅಟಿಕಾ ಬಾಬು ಸೇರ್ಪಡೆ: ಅಟಿಕಾ ಗೋಲ್ಡ್ ಮಾಲೀಕ ಬೊಮ್ಮನಹಳ್ಳಿ ಬಾಬು ಜೆಡಿಎಸ್ಗೆ ಸೇರ್ಪಡೆಯಾದರು. ಕುಮಾರಸ್ವಾಮಿ ಪಕ್ಷದ ಬಾವುಟ ನೀಡುವ ಮೂಲಕ ಅಟಿಕಾ ಬಾಬು ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ಮಾತನಾಡಿದ ಅಟಿಕಾ ಬಾಬು, ಜೆಡಿಎಸ್ ಪಕ್ಷದ ಸಿದ್ದಾಂತ ಒಪ್ಪಿ ಸೇರ್ಪಡೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಒಲವಿದ್ದು, ತುಮಕೂರಿನಿಂದ ಟಿಕೆಟ್ ಕೇಳಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಕೇಶವ ಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ: ಸಂಘ ಪರಿವಾರದ ನಾಯಕರ ಜೊತೆ ಸಭೆ