ಬೆಂಗಳೂರು : ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿ ಹೊಸ ಉದ್ಯಮ ಹಾಗೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗಾರಿಕಾ ಸ್ನೇಹಿ ನೀತಿಗಳನ್ನು ಜಾರಿಗೆ ತರಲು ಮುಂದಾಗಿದೆ.
ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲೂ ಸುಮಾರು 1.5 ಕೋಟಿ ರೂ. ಹೂಡಿಕೆ ರಾಜ್ಯಕ್ಕೆ ಹರಿದು ಬಂದಿದೆ. ಈ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವುದು ಸರ್ಕಾರದ ಉದ್ದೇಶ. ಹಾಗಾಗಿ, ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬರುವ ಹೂಡಿಕೆದಾರರಿಗೆ ಯಾವುದೇ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.
ನೆರೆ ರಾಜ್ಯಗಳಿಂದಲೂ ಹೂಡಿಕೆ ಆಕರ್ಷಣೆಗೆ ಪೈಪೋಟಿ ಆರಂಭವಾಗಿದೆ. ಕಳೆದ ಹಲವು ವರ್ಷಗಳಿಂದ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ನಮ್ಮ ರಾಜ್ಯ, ಇನ್ನಷ್ಟು ಹೂಡಿಕೆ ಸ್ನೇಹಿ ಕ್ರಮಗಳಿಗೆ ಸರ್ಕಾರ ಚಾಲನೆ ನೀಡುತ್ತಿದೆ.
ಹೂಡಿಕೆಗೆ ಅವಕಾಶಗಳೇನು? : ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್, ಆಟೋಮೊಬೈಲ್ ಮತ್ತು ವಿದ್ಯುತ್ ಚಾಲಿತ ವಾಹನ, ಏರೋಸ್ಪೇಸ್ ಮತ್ತು ಡಿಫೆನ್ಸ್, ಸ್ಟೀಲ್ ಮತ್ತು ಸಿಮೆಂಟ್,ಎಫ್ಎಂಸಿಜಿ ಮತ್ತು ಆಹಾರ ಸಂಸ್ಕರಣೆ, ಜವಳಿ ಹಾಗೂ ಆಟಿಕೆ ವಲಯದಲ್ಲಿ ಹೂಡಿಕೆ ಅವಕಾಶಗಳನ್ನು ತೆರೆದಿಡುತ್ತಿದೆ. ಹೂಡಿಕೆದಾರರಿಗೂ ಮನವರಿಕೆ ಮಾಡಿಕೊಡಲಾಗುತ್ತಿದೆ.
ಉದ್ಯೋಗ ಸೃಷ್ಟಿ : ರಾಜ್ಯ ಸರ್ಕಾರ 2022ರ ನವೆಂಬರ್ 2 ರಿಂದ 3 ದಿನ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಿದೆ. 7.5 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಣೆ ಗುರಿ ಇಟ್ಟುಕೊಂಡಿದೆ. ಅದರಲ್ಲಿ ಕನಿಷ್ಠ 5 ಲಕ್ಷ ಉದ್ಯೋಗ ಸೃಷ್ಟಿಸುವಂತೆ ಮಾಡುವುದು ಸರ್ಕಾರದ ಉದ್ದೇಶ.
ಹೂಡಿಕೆಗೆ ಹೆಚ್ಚಿನ ಅವಕಾಶಗಳಿರುವ ಏಳು ಹೊಸ ವಲಯಗಳನ್ನು ಗುರುತಿಸಿದೆ. ಮುಂದಿನ 9 ವರ್ಷಗಳಲ್ಲಿ 11 ಕೈಗಾರಿಕಾ ಕ್ಲಸ್ಟರ್ಗಳಿಂದ 9 ಲಕ್ಷ ಉದ್ಯೋಗ ಸೃಷ್ಟಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ಹೂಡಿಕೆದಾರರ ಸಮಾವೇಶಕ್ಕೆ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಯಾಕೆಂದರೆ, ಉದ್ಯಮಿಯಾಗು, ಉದ್ಯೋಗ ನೀಡು ಎಂಬುದು ಇದರ ಉದ್ದೇಶ. ವಿದ್ಯಾರ್ಥಿಗಳು ಬಂದಲ್ಲಿ ಉದ್ಯಮ ಸ್ಥಾಪನೆಗೆ ಒಲವು ಮೂಡಬಹುದು ಎಂಬುದು ಸರ್ಕಾರದ ಉದ್ದೇಶವಾಗಿದೆ.
ಹೂಡಿಕೆ ಎಷ್ಟು?: 2020-21-56884 ಕೋಟಿ ರೂ. ಮಾಡಲಾಗಿದೆ. 2021-22 - 62085 ಕೋಟಿ ರೂ. ನಿರೀಕ್ಷಿಸಲಾಗಿದೆ.
ಹೊಸ ನೀತಿಯಲ್ಲಿ ಏನಿದೆ?: ಹೊಸ ಕ್ಷೇತ್ರದಲ್ಲಿ ಹೂಡಿಕೆ ಹರಿದು ಬರಲು ಸಹಕಾರಿಯಾಗುವಂತೆ ಹೊಸ ಹೊಸ ನೀತಿಗಳನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ನೂತನ ಕೈಗಾರಿಕಾ ನೀತಿ 2020-25 ಜಾರಿಯಲ್ಲಿದೆ. ಅದಕ್ಕೆ ಪೂರಕವಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ಎಲ್ಲ ನೀತಿಗಳನ್ನು ರಾಜ್ಯಕ್ಕೆ ತರುವುದಕ್ಕೂ ನಿರ್ಧರಿಸಲಾಗಿದೆ.
ಅದರಲ್ಲಿ ಮುಖ್ಯವಾಗಿ ಬಯೋ ಎನರ್ಜಿ, ಏರೋಸ್ಪೇಸ್, ಡಿಫೆನ್ಸ್, ಸೆಮಿ ಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಡೇಟಾ ಸೆಂಟರ್, ಸಂಶೋಧನೆ ಮತ್ತು ಅಭಿವೃದ್ಧಿ ಸೇರಿ ಮತ್ತಿತರ ನೀತಿಗಳನ್ನು ತರಲಾಗುತ್ತದೆ. ಬಯೋ ಎನರ್ಜಿಗೆ ಉತ್ತಮ ಅವಕಾಶ ಇದೆ. 1000 ಮೆ.ವ್ಯಾ ವಿದ್ಯುತ್ ಉತ್ಪಾದನೆಗೆ ಅವಕಾಶ ಇದೆ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಹೊಸ ನೀತಿಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ.
ಇನ್ನು, ಕೇಂದ್ರ ಜಾರಿಗೆ ತಂದಿರುವ ಒಂದು ಜಿಲ್ಲೆ, ಒಂದು ಉತ್ಪನ್ನ ಮಾದರಿಯನ್ನು ಕೈಗಾರಿಕೆಯಲ್ಲೂ ಅಳವಡಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಗುಣಮಟ್ಟಕ್ಕೆ ಕೈಗಾರಿಕೆಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ಗುರುತಿಸಿರುವ ಏಳು ವಲಯಗಳಲ್ಲಿ ನಾಲ್ಕರಿಂದ ಐದು ಜಿಲ್ಲೆಗೆ ಒಂದರಂತೆ ಹಂಚಿಕೆ ಮಾಡಿ ಅಭಿವೃದ್ಧಿ ಪಡಿಸಲಾಗುತ್ತದೆ.
ರಾಜ್ಯದಲ್ಲಿ ಈವರೆಗೆ ಕೈಗಾರಿಕೆಗಳ ಭೂ ಬ್ಯಾಂಕ್ಗೆ ಸುಮಾರು 90 ಸಾವಿರ ಎಕರೆ ಸ್ವಾಧೀನ ಮಾಡಲಾಗಿದೆ. ಅದರಲ್ಲಿ ಶೇ.10 ಮಾತ್ರ ಈವರೆಗೆ ಬಳಕೆಯಾಗಿಲ್ಲ. ಅದನ್ನು ವಾಪಸ್ ಪಡೆದು ಹೊಸದಾಗಿ ಮಂಜೂರಾಗುವ ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗುತ್ತದೆ.
ಮುಂದಿನ ಜಿಮ್ಗೆ 25 ಸಾವಿರ ಎಕರೆ ಗುರುತಿಸಲಾಗುತ್ತಿದೆ. ತಾಲೂಕು ಮಟ್ಟದಲ್ಲಿ 50 ರಿಂದ 200 ಎಕರೆ ಹಾಗೂ ಜಿಲ್ಲಾ ಮಟ್ಟದಲ್ಲಿ 1000 ಎಕರೆ ಗುರುತಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಧಾರವಾಡ ಎಫ್ಎಂಸಿಜಿ, ಕೊಪ್ಪಳ ಗೊಂಬೆ, ಯಾದಗಿರಿ ಔಷಧ, ಜವಳಿ ಬಳ್ಳಾರಿ ಹಾಗೂ ರಾಮನಗರ ವಿದ್ಯುತ್ ವಾಹನ. ಇನ್ನೂ ಆರು ಕ್ಲಸ್ಟರ್ಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಆರಂಭಿಸಬೇಕಾಗಿದೆ.
ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರದ ಬೆಂಬಲ : ಕೈಗಾರಿಕೆಗಳ ಸರಳ ವ್ಯವಹಾರಕ್ಕಾಗಿ ಅಫಿಡವಿಟ್ ಆಧಾರಿತ ಒಪ್ಪಿಗೆ (ಎಬಿಸಿ) ವ್ಯವಸ್ಥೆ ತರಲಾಗುತ್ತಿದೆ. ಸರ್ಕಾರ ಏಕಗವಾಕ್ಷಿ ಅಥವಾ ಉನ್ನತ ಮಟ್ಟದ ಸಮಿತಿಯಲ್ಲಿ ಒಪ್ಪಿಗೆ ದೊರೆತ ಕೂಡಲೇ ಕೈಗಾರಿಕೆ ಆರಂಭಿಸಲು ಅಡ್ಡಿ ಇಲ್ಲ. ಸುಮಾರು 15 ಇಲಾಖೆಗಳಿಂದ ಪಡೆಯಬೇಕಾದ ಒಪ್ಪಿಗೆಗಳಿಗೆ ಕಾಯುವ ಅಗತ್ಯವಿಲ್ಲ.
3 ವರ್ಷದಲ್ಲಿ ಒಪ್ಪಿಗೆ ಪಡೆಯಬಹುದು. ಐದು ಎಕರೆ ಒಳಗಿನ ಜಮೀನು ಮಂಜೂರಾತಿ ಏಕಗವಾಕ್ಷಿ ಮತ್ತು ಉನ್ನತ ಮಟ್ಟದ ಸಮಿತಿಯಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಮತ್ತೆ ಲ್ಯಾಂಡ್ ಆಡಿಟ್ ಕಮಿಟಿ ಮುಂದೆ ಹೋಗಬೇಕಾಗಿತ್ತು.
ಆದರೆ, ಈಗ ಅದರ ಅಗತ್ಯವಿಲ್ಲವೆಂಬ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಆದೇಶ ಹೊರ ಬರುವ ಸಾಧ್ಯತೆ ಇದೆ. ಹೊಸದಾಗಿ ಕೈಗಾರಿಕೆಗಳನ್ನು ಪ್ರಾರಂಭಿಸುವವರಿಗೆ ಬೇಕಾಗುವ ಹೊಸ ರಿಯಾಯಿತಿಗಳನ್ನು ಕೈಗಾರಿಕಾ ನೀತಿಯಲ್ಲಿ ತಿಳಿಸಲಾಗಿದೆ.