ಬೆಂಗಳೂರು: ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬೆಂಗಳೂರಿನ ಹನ್ನೊಂದು ವರ್ಷದ ಬಾಲಕ ಹಾಗೂ ಆತನಿಗೆ ರಕ್ತದ ಸ್ಟೆಮ್ ಸೆಲ್ಸ್ ದಾನ ಮಾಡಿ ಜೀವ ಉಳಿಸಲು ಸಹಾಯವಾದ ಜರ್ಮನ್ ವ್ಯಕ್ತಿಯನ್ನು ಡಿಕೆಎಂಎಸ್ ಬಿಎಂಎಸ್ಟಿ ಫೌಂಡೇಶನ್ ಎನ್ಜಿಒ ಸಂಸ್ಥೆ ಇಂದು ವರ್ಚುಯಲ್ ಮೂಲಕ ಪ್ರಥಮ ಭೇಟಿ ಮಾಡುವ ಕಾರ್ಯಕ್ರಮ ಆಯೋಜಿಸಿತ್ತು.
![german-citizen-gave-stem-cell-for-indian-boy](https://etvbharatimages.akamaized.net/etvbharat/prod-images/12895686_733_12895686_1630079977639.png)
ನಗರದ ತ್ವರಿತ್ ಎಂಬ ಬಾಲಕ ಎಪ್ಲಾಸ್ಟಿಕ್ ಅನೀಮಿಯ ಎಂಬ ಖಾಯಿಲೆಯಿಂದ ಬಳಲುತ್ತಿದ್ದ. ಈ ಖಾಯಿಲೆಯಿಂದ ಬಾಲಕನ ದೇಹದಲ್ಲಿ ಹೊಸ ರಕ್ತದ ಜೀವಕೋಶಗಳ ಉತ್ಪಾದನೆ ನಿಂತು ಹೋಗಿತ್ತು. ಅಲ್ಲದೇ, ಬಾಲಕ ಬದುಕಲು ರಕ್ತದ ಕಾಂಡಕೋಶ ಕಸಿ (ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟ್) ಅಗತ್ಯವಿತ್ತು. ಹೀಗಾಗಿ ಜೀವ ಉಳಿಸಲು ಜರ್ಮನಿಯ ಡುಕ್ ಫಾಮ್ ಎಂಗಾಕ್ ಎಂಬ ವ್ಯಕ್ತಿ ರಕ್ತದ ಕಾಂಡಕೋಶ ದಾನವಾಗಿ ನೀಡಿದ್ದರು. ಆದರೆ, ನಿಯಮಗಳ ಪ್ರಕಾರ ಎರಡು ವರ್ಷ ಗೌಪ್ಯವಾಗಿಟ್ಟು ನಂತರ ಪರಸ್ಪರ ಪರಿಚಯಿಸಲಾಗುತ್ತದೆ.
ತ್ವರಿತ್ಗೆ ಚಿಕಿತ್ಸೆ ನೀಡಿದ ನಾರಾಯಣ ಹೆಲ್ತ್ ಸಿಟಿಯ ಡಾ.ಸುನಿಲ್ ಭಟ್ ಮಾತನಾಡಿ, ಈ ರಕ್ತದ ಕಾಂಡಕೋಶ ಕಸಿಗೆ ಹ್ಯುಮನ್ ಲ್ಯುಕೋಸೈಟ್ ಅ್ಯಂಟಿಜೆನ್ ಹೊಂದುವ ದಾನಿಯ ಅಗತ್ಯವಿತ್ತು. ಇದನ್ನು ಡಿಕೆಎಂಎಸ್, ಬಿಎಂಎಸ್ಟಿ ಸಂಸ್ಥೆ ಹುಡುಕಿಕೊಡುತ್ತದೆ. ಸ್ಟೆಮ್ ಸೆಲ್ ನೋಂದಣಿ ಮಾಡಿಕೊಂಡಿರುವ ಸಂಬಂಧಿಕರಲ್ಲದ ಸ್ವಯಂ ಇಚ್ಛೆಯ ದಾನಿಗಳನ್ನು ಈ ಸಂಸ್ಥೆ ಒಂದೆಡೆ ಸೇರಿಸಿರುತ್ತದೆ. ಈ ಮೂಲಕ ತ್ವರಿತ್ ನಂತಹ ವ್ಯಕ್ತಿಗಳ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ರೀತಿ ದಾನಿಗಳಿದ್ದಲ್ಲಿ ಸಂಸ್ಥೆಯ www.dkms-bmst.org/register ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.