ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮಿಂಚುವ ಮುತ್ತಿನ ಹಾರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಆಭರಣಗಳ ತಯಾರಿಕೆಯಲ್ಲಿ ಹೇರಳವಾಗಿ ಮುತ್ತುಗಳನ್ನು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮುತ್ತಿನ ಕೃಷಿಯನ್ನು ಜನಪ್ರಿಯಗೊಳಿಸಲು ಕೃಷಿ ಮೇಳದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಮುಂದಾಗಿದೆ.
ಈ ಕೃಷಿಯನ್ನು ಮನೆಯ ಡ್ರಮ್, ಟ್ಯಾಂಕ್, ಸಿಮೆಂಟ್ನಿಂದ ತಯಾರಿಸಿದ ತೊಟ್ಟಿಗಳಲ್ಲಿ ಮಾಡಬಹುದು. ಕಪ್ಪೆ ಚಿಪ್ಪನ್ನು ಟ್ಯಾಂಕ್ನಲ್ಲಿ ಹಾಕಬೇಕಾಗುತ್ತದೆ. ನಂತರ ಪ್ಲಾಂಕ್ಟನ್ ಸಸ್ಯ ಬೆಳೆಯುವಂತೆ ಮಾಡಬೇಕು. ಕೆಲ ದಿನಗಳ ಬಳಿಕ ನೀರಿಗೆ ಮೆಂಥಾಲ್ ಪುಡಿ ಬೆರೆಸಿದಾಗ ಕಪ್ಪೆ ಚಿಪ್ಪುಗಳು ಅರೆಪ್ರಜ್ಞಾವಸ್ಥೆಗೆ ಹೋಗುತ್ತವೆ. ಈ ವೇಳೆ ದಂತ ಚಿಕಿತ್ಸೆಗೆ ಉಪಯೋಗಿಸುವ ಕೋಲ್ಡ್ ಕ್ಯೂರಿಂಗ್ ಅಕ್ರೈಲಿಕ್ ಪುಡಿ ಮತ್ತು ದ್ರಾವಣವನ್ನು ಉಪಯೋಗಿಸಿ ಅಚ್ಚುಗಳನ್ನು ಮಾಡಿಕೊಳ್ಳಬೇಕು. ಅದನ್ನು ಕಪ್ಪೆ ಚಿಪ್ಪಿನೊಳಗೆ ತೂರಿಸಬೇಕು, ಆ ನಂತರ ಆ್ಯಂಟಿಬಯೋಟಿಕ್ ದ್ರಾವಣ ಸೇರಿಸಬೇಕು.
![Pearl farming](https://etvbharatimages.akamaized.net/etvbharat/prod-images/19-11-2023/20059335_thumbperal.jpg)
ವಿವಿಧ ವಿನ್ಯಾಸಗಳ ಮುತ್ತು ಕೃಷಿ: ಸಲ್ಯಾಮೆಲ್ಲಿಡೆನಸ್ ಮಾರ್ಜಿನಾಲಿಸ್, ಲ್ಯಾಮೆಲ್ಲಿಡೆನಸ್ ಕೋರಿಯನಸ್, ಪೆರ್ರೆಷಿಯಾ ಕೊರುಗಾಟ ಜಾತಿಯ ಕಪ್ಪೆ ಚಿಪ್ಪು ಬಳಸಿಕೊಂಡು ಮುತ್ತು ಕೃಷಿ ಮಾಡಬಹುದಾಗಿದೆ. ಇದಕ್ಕೆ ಸುಮಾರು 10 ತಿಂಗಳ ಅವಧಿ ಬೇಕು. ವೃತ್ತಾಕಾರದ ಮುತ್ತು ಪಡೆಯಲು ಅತ್ಯಧಿಕ ಸಮಯ ತಗಲುತ್ತದೆ. ವಿನ್ಯಾಸ ಹಾಗೂ ವೃತ್ತದ ಆಕಾರದ ಮುತ್ತುಗಳನ್ನು ಒಂದೇ ಕಪ್ಪೆ ಚಿಪ್ಪಿನಲ್ಲಿ ಬೆಳೆಸಬಹುದು. ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹಲವು ವಿನ್ಯಾಸದ ಮುತ್ತುಗಳನ್ನು ರೈತರು ಸಹ ಬೆಳೆದು, ಅತ್ಯಧಿಕ ಲಾಭ ಪಡೆಯಬಹುದು. ಕಪ್ಪೆ ಚಿಪ್ಪಿನ ಹೊರ ಕವಚಗಳನ್ನು ಬೇರ್ಪಡಿಸಿದಾಗ ಸಿಹಿ ನೀರಿನ ಮುತ್ತುಗಳು ಸಿಗುತ್ತವೆ.
![Pearl farming](https://etvbharatimages.akamaized.net/etvbharat/prod-images/19-11-2023/20059335_thumbmuttu.jpg)
ಕಪ್ಪೆ ಚಿಪ್ಪಿನಲ್ಲಿ ಎರಡು ಮುತ್ತು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಒಳನಾಡು ಮೀನುಗಾರಿಕೆ ಇಲಾಖೆ ಸಿಹಿ ನೀರಿನ ಮುತ್ತಿನ ಕೃಷಿ ಮಾಡುವವರಿಗೆ ತರಬೇತಿ ನೀಡುತ್ತಿದೆ. ಯಾವ ರೀತಿಯಾಗಿ ಮುತ್ತಿನ ಕೃಷಿ ಮಾಡಬೇಕು. ಯಾವೆಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿಕೊಡಲಾಗುತ್ತಿದೆ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಒಳನಾಡು ಮೀನುಗಾರಿಕಾ ಘಟಕದ ಸಹಾಯಕ ಪ್ರಾಧ್ಯಾಪಕ (ಜಲಕೃಷಿ) ಡಾ. ಸಿ. ಕಿಶೋರ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದರು. ಪ್ರಸ್ತುತ ಮುತ್ತಿನ ಕೃಷಿಯತ್ತ ಯುವಕರ ಒಲವು ಹೆಚ್ಚಿದೆ. ರೈತರು ಸಹ ತರಬೇತಿ ಪಡೆದುಕೊಂಡು ಕೃಷಿ ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಒಂದು ಕಪ್ಪೆ ಚಿಪ್ಪಿನಲ್ಲಿ ಎರಡು ಮುತ್ತುಗಳನ್ನು ಬೆಳೆಯಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು ಕೃಷಿ ಮೇಳ ಸಂಪನ್ನ.. ಜನರನ್ನು ಆಕರ್ಷಿಸಿದ ಸಿರಿಧಾನ್ಯ ಮೇಳ