ಬೆಂಗಳೂರು : ಕೆಪಿಎಸ್ಸಿ ಅಧ್ಯಕ್ಷ ಶ್ಯಾಂ ಭಟ್ ಹೆಸರಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಕೆಲಸ ಕೊಡಿಸೋದಾಗಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸಿಎಆರ್ನ ನಿವೃತ್ತ ಆರ್ಎಸ್ಐ ಪ್ರದೀಪ್ ಮೋಸಗೊಳಗಾದವರು. ತನ್ನ ಮಗ ನಾಗೇಂದ್ರ ಎಂಬುವವರಿಗೆ ಕೆಲಸ ಕೊಡಿಸಲು ಧನರಾಜ್ ಎಂಬಾತನನ್ನ ಸಂಪರ್ಕ ಮಾಡಿದ್ದಾರೆ. ಈ ವೇಳೆ 20 ಲಕ್ಷ ರೂ. ಹಣ ಕೊಟ್ಟರೆ ಕೆಪಿಎಸ್ಸಿ ಅಧ್ಯಕ್ಷ ಶ್ಯಾಂ ಭಟ್ ರನ್ನ ಪರಿಚಯಿಸಿ ಅಬಕಾರಿ ಇನ್ಸ್ಪೆಕ್ಟರ್ ಕೆಲಸ ಕೊಡಿಸೋದಾಗಿ ಹೇಳಿ ಮುಂಗಡವಾಗಿ 4 ಲಕ್ಷ 50 ಸಾವಿರ ರೂ. ಹಣವನ್ನ ಗಾಂಧಿನಗರದ ದಿವ್ಯಾ ರೆಸಿಡೆನ್ಸಿಯಲ್ಲಿ ಪಡೆದುಕೊಂಡು ನಂತರ 5 ಲಕ್ಷ 50 ಸಾವಿರ ರೂ. ಹಣವನ್ನ ಪಡೆದಿದ್ದ ಎಂದು ಆರೋಪಿಸಲಾಗಿದೆ.
ಮತ್ತೆ ಧನರಾಜ್ 10 ಲಕ್ಷ ರೂ. ಹಣವನ್ನ ಶ್ಯಾಂ ಭಟ್ ಗೆ ಕೊಟ್ಟಿರೋದಾಗಿ ಹೇಳಿ 2 ನೇ ಲಿಸ್ಟ್ ನಲ್ಲಿ ಜಾಬ್ ಆಫರ್ ಇರುತ್ತೆ ಅಂದಿದ್ದ. ಧನರಾಜ್ ಬಳಿಕ ಯಾವುದೇ ಕೆಲಸ ಮಾಡಿಕೊಡದೆ ವಂಚನೆ ಮಾಡಿದ್ದಾನೆ. ಇನ್ನು ಮೋಸ ಹೋದವರು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಡಿಸಿಪಿ ರವಿ.ಡಿ.ಚೆನ್ನಣ್ಣವರ್ ಮಾತನಾಡಿ, ಅಬಕಾರಿ ಹುದ್ದೆ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ಎಸಿಪಿ ಹಾಗೂ ಇನ್ಸ್ಪೆಕ್ಟರ್ ತಂಡ ರಚನೆ ಮಾಡಿದ್ದೀವಿ. ತನಿಖೆ ಮುಂದುವರೆಸಿ ಆರೋಪಿ ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.