ಬೆಂಗಳೂರು: ಮಾಜಿ ಸಚಿವ ವೆಂಕಟರಮಣಪ್ಪ ಅವರು ಇಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಮಾಡಿ ಸಮಾಲೋಚಿಸಿದರು.
ಸದಾಶಿವನಗರದ ಪರಮೇಶ್ವರ್ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಸಂಸದ ನಾರಾಯಣಸ್ವಾಮಿ ಅವರಿಗೆ ಗೊಲ್ಲರಹಟ್ಟಿಯಲ್ಲಿ ಪ್ರವೇಶ ನಿಷೇಧ ಮಾಡಬಾರದಿತ್ತು. ಇಂತಹ ಪರಿಸ್ಥಿತಿ ನಿರ್ಮಾಣ ಆಗಬಾರದು ಒಳ್ಳೆಯ ಬೆಳವಣಿಗೆ ಅಲ್ಲ ಅದು. ಆದರೆ, ನಾನು ಶಾಸಕನಾಗಿ ಹೋದಾಗ ಯಾವ ರೀತಿಯೂ ಹೀಗಾಗಿರಲಿಲ್ಲ. ಲಂಬಾಣಿ, ಭೋವಿ ಸಮಾಜದವರಿಗೆ ಪ್ರವೇಶ ಕೊಡ್ತಾರೆ. ಆದ್ರೆ ಹರಿಜನ ಸಮಾಜದವರಿಗೆ ಅವಕಾಶ ಕೊಡಲ್ಲ ಎಂದರು.
ಪರಮೇಶ್ವರ್ ಪ್ರತಿಪಕ್ಷ ನಾಯಕನಾಗುವ ವಿಚಾರ ಮಾತನಾಡಿ, ಇದು ಪರಮೇಶ್ವರ್ ಕೈಯಲ್ಲೂ ಇಲ್ಲ, ಸಿದ್ದರಾಮಯ್ಯ ಕೈಯಲ್ಲೂ ಇಲ್ಲ, ಸ್ಥಾನ ಮಾನ ನೀಡೋದು ಹೈಕಮಾಂಡ್ ಕೈಯಲ್ಲಿದೆ ಎಂದರು.