ಬೆಂಗಳೂರು: ಭಾರತದಲ್ಲಿ ಇದುವರೆಗೂ ಹೂಡಿಕೆ ಮಾಡದ ಚೀನಾದಲ್ಲಿರುವ ಕಂಪನಿಗಳನ್ನು ಪತ್ತೆಹಚ್ಚಿ. ಅಲ್ಲಿಂದು ಹೊರಬರಲು ಇಚ್ಛಿಸುವ ಕಂಪನಿಗಳನ್ನು ಪಟ್ಟಿ, ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ತಿಳಿಸುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಸ್ಪೆಷಲ್ ಇನ್ವೆಸ್ಟ್ಮೆಂಟ್ ಟಾಸ್ಕ್ ಫೋರ್ಸ್ಗೆ ಸೂಚನೆ ನೀಡಿದರು.
ಕೊರೊನಾ ಸಂಕಷ್ಟದಿಂದ ಚೀನಾದಿಂದ ಹೊರ ಬರುತ್ತಿರುವ ಕೈಗಾರಿಕಾ ಘಟಕಗಳನ್ನು ರಾಜ್ಯದತ್ತ ಸೆಳೆಯಲು ರಚಿಸಲಾದ ಸ್ಪೆಷಲ್ ಇನ್ವೆಸ್ಟ್ಮೆಂಟ್ ಟಾಸ್ಕ್ ಫೋರ್ಸ್ನ ಮೊದಲ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊರೊನಾ ಮಹಾಮಾರಿಯ ಸಂದರ್ಭವನ್ನು ನಿರ್ವಹಿಸಿದ ರೀತಿಯನ್ನು ಗಮನಿಸಿದಲ್ಲಿ ರಾಜ್ಯ ಸರ್ಕಾರದ ಆಡಳಿತ ಯಂತ್ರದ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ನಮ್ಮ ರಾಜ್ಯದಲ್ಲಿ ಹೂಡಿಕೆಗೆ ಉತ್ತಮ ವಾತಾವರಣವಿದೆ ಎಂದರು.
ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವ ಭೂಮಿ ಹಾಗೂ ಕಾರ್ಮಿಕರ ಸಂಖ್ಯೆಯು ರಾಜ್ಯದಲ್ಲಿ ಲಭ್ಯವಿದೆ. ಅಲ್ಲದೆ, ರಾಜ್ಯ ಸರ್ಕಾರ ಈಗಾಗಲೇ ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಸುಧಾರಣೆಗಳನ್ನು ಕೈಗೊಂಡಿದೆ. ಯಾವುದೇ ಪರವಾನಗಿಯನ್ನು ಪಡೆಯದೆ, ಉದ್ಯಮ ಸ್ಥಾಪಿಸಿ ಮೂರು ವರ್ಷಗಳ ನಂತರ ಅಗತ್ಯ ಪರವಾನಿಗೆ ಪಡೆಯುಲು ಅವಕಾಶ ಮಾಡಿ ಕೊಡುವ ಹೊಸ ಕಾಯ್ದೆಯನ್ನು ಜಾರಿಗೊಳಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆ ಮಾಡಬಹುದಾದ ಕೈಗಾರಿಕೆಗಳ ಪಟ್ಟಿಯನ್ನು ಮಾಡಿ. ಈಗಾಗಲೇ ನಿರ್ಧರಿಸಿದಂತೆ ಟಾಪ್ 100 ಕಂಪನಿಗಳನ್ನು ಪಟ್ಟಿ ಮಾಡಿ ರಾಜ್ಯ ಸರ್ಕಾರದ ವತಿಯಿಂದ ಸಂಪರ್ಕಿಸುವಂತೆ ಸೂಚಿಸಿದರು.