ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಚರ್ಚಿಸಿ ಜಿಲ್ಲೆಗಳಲ್ಲಿ ವ್ಯಾಪಕವಾಗುತ್ತಿರುವ ಕೊರೊನಾ ವೈರಸ್ ಮತ್ತು ಲಾಕ್ ಡೌನ್ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು.
ಜೆಪಿ ನಗರದ ತಮ್ಮ ನಿವಾಸದಿಂದ ನಡೆಸಿದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಮಂಡ್ಯ ಶಾಸಕ ಶ್ರೀನಿವಾಸ್, ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು, ನಾಗಮಂಗಲ ಶಾಸಕ ಸುರೇಶ್ ಗೌಡ, ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್, ಶಿರಾ ಶಾಸಕ ಸತ್ಯನಾರಾಯಣ ಅವರು ತಮ್ಮ ಕ್ಷೇತ್ರದಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಕೊರೊನಾ ವೈರಸ್ ತಡೆಗೆ ಎರಡೂ ಜಿಲ್ಲೆಗಳಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕುಮಾರಸ್ವಾಮಿ ಚರ್ಚಿಸಿದರು. ಅಲ್ಲದೇ ಲಾಕ್ ಡೌನ್ ನಿಂದ ಸಮಸ್ಯೆಗೆ ಸಿಲುಕಿರುವವರಿಗೆ, ಪ್ರಮುಖವಾಗಿ ರೈತರಿಗೆ ಎಲ್ಲ ರೀತಿಯ ಸಹಾಯ, ಸಹಕಾರವನ್ನು ಕ್ಷೇತ್ರದ ಮಟ್ಟದಲ್ಲಿ ನೀಡುವಂತೆ ಸೂಚಿಸಿದರು.
ರಾಮನಗರ, ಚನ್ನಪಟ್ಟಣದಲ್ಲಿ ತಾವು ಆರಂಭಿಸಿರುವ 'ಎಚ್ಡಿಕೆ ಜನತಾ ದಾಸೋಹ'ವನ್ನು ಎಲ್ಲರೂ ಆರಂಭಿಸಿ ಹಸಿದವರಿಗೆ ಆಹಾರ ಪೂರೈಸುವಂತೆ ತಿಳಿಸಿದರು. ಇದಕ್ಕೆ ಶಾಸಕರು ಒಪ್ಪಿಗೆ ಸೂಚಿಸಿದರು.