ದೊಡ್ಡಬಳ್ಳಾಪುರ(ಬೆಂಗಳೂರು): ಜಾಗ ಸೇರಿದ್ದು ರಾಜಘಟ್ಟ ಗ್ರಾಮ ಪಂಚಾಯಿತಿಗೆ, ಆದರೆ ನಿವೇಶನಗಳ ಖಾತೆಯಾಗಿದ್ದು ಕಂಟನಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಲಂಚದ ಆಮಿಷಕ್ಕೆ ಒಳಗಾದ ಪಿಡಿಒ ನಂದಿನಿ ಅವರು ಅಕ್ರಮವಾಗಿ ನಿವೇಶನಗಳ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸರ್ವೇ ನಂಬರ್ 22ರ 11 ಎಕರೆ ಗೋಮಾಳ ಜಾಗಕ್ಕೆ ಗಡಿ ಸಮಸ್ಯೆ ಎದುರಾಗಿದೆ. ಸರ್ವೇ ನಂಬರ್ 22 ಜಾಗಕ್ಕಾಗಿ ರಾಜಘಟ್ಟ ಮತ್ತು ಕಂಟನಕುಂಟೆ ಗ್ರಾಮ ಪಂಚಾಯತ್ಗಳ ನಡುವೆ ಗಡಿ ವಿವಾದ ಪ್ರಾರಂಭವಾಗಿದೆ. ಸರ್ವೇ ನಂಬರ್ 22ರ ಜಾಗ ರಾಜಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದೆ. ಆದರೆ, 2005ರಲ್ಲಿ ಇದೇ ಜಾಗದಲ್ಲಿನ ನಿವೇಶನಗಳನ್ನು ಕಂಟನಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಖಾತೆ ಮಾಡಲಾಗಿದೆ.
ದಿನಾಂಕ 21/08/2020 ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವ ಕಂಟನಕುಂಟೆ ಗ್ರಾಮ ಪಂಚಾಯಿತಿ ಪಿಡಿಒ, ಸರ್ವೇ ನಂಬರ್ 22ರ ಗೋಮಾಳ ಜಾಗ ರಾಜಘಟ್ಟ ಪಂಚಾಯಿತಿಗೆ ಸೇರಿದ್ದು, ಇದೇ ಜಾಗದಲ್ಲಿ ಕಂಟನಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು, 22 ಅಕ್ರಮ ಖಾತೆಗಳನ್ನು ವಜಾ ಮಾಡಿ ಸರ್ಕಾರದ ವಶಕ್ಕೆ ಪಡೆಯುವಂತೆ ವರದಿ ನೀಡಿದ್ದರು.
![Doddaballapura land dispute: Complaint against PDO Nandini!](https://etvbharatimages.akamaized.net/etvbharat/prod-images/15759483_news.jpg)
ಸರ್ವೇ ನಂಬರ್ 22ರ ಜಾಗ ಸರ್ಕಾರಿ ಗೋಮಾಳ ಮತ್ತು ಇದರಲ್ಲಿರುವ ನಿವೇಶನಗಳು ಅಕ್ರಮ ಖಾತೆಗಳೆಂದು 2020ರಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿರುವ ಪಿಡಿಒ ನಂದಿನಿ ಅವರು 2022ರಲ್ಲಿ ಇದೇ ಸರ್ವೇ ನಂಬರ್ 22ರ ಜಾಗದಲ್ಲಿ ಕೆ.ಪಿ.ಚಂದ್ರಕಲಾರವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟು ಮನೆ ನಿರ್ಮಾಣಕ್ಕೆ ಅನುಮತಿ ಮತ್ತು ಸರ್ಕಾರಿ ಗ್ರ್ಯಾಂಟ್ ನೀಡಿದ್ದಾರೆ.
ಕೆ.ಪಿ ಚಂದ್ರಕಲಾ ಅವರಿಂದ ಲಂಚ ಪಡೆದಿರುವ ಪಿಡಿಒ ನಂದಿನಿಯವರು ಅಕ್ರಮ ಖಾತೆಗಳನ್ನು ಮಾಡಿಕೊಟ್ಟಿದ್ದಾರೆಂದು ರಾಜಘಟ್ಟದ ನಿವಾಸಿ ನಾರಾಯಣಸ್ವಾಮಿ ನೇರ ಆರೋಪ ಮಾಡಿದ್ದಾರೆ. ಪಿಡಿಒ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಕಾರ್ಯ ನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದಾರೆ.
![Doddaballapura land dispute: Complaint against PDO Nandini!](https://etvbharatimages.akamaized.net/etvbharat/prod-images/15759483_newssss.jpg)
ಇದನ್ನೂ ಓದಿ: ನವೆಂಬರ್ನಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸಿ: ಕೊರಿಯಾ ಗಣರಾಜ್ಯಕ್ಕೆ ಸಿಎಂ ಮನವಿ
ಎರಡು ಗ್ರಾಮ ಪಂಚಾಯತ್ಗಳ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಾಜಘಟ್ಟ ಮತ್ತು ಕಂಟನಕುಂಟೆ ಗ್ರಾಮ ಪಂಚಾಯತ್ ಪಿಡಿಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಜಾಗದಲ್ಲಿ ಎರಡು ಪಂಚಾಯತ್ ಕಡೆಯಿಂದಲೂ ಖಾತೆ ಮಾಡಲಾಗಿದೆ. ಆದರೆ, ಈ ಜಾಗ ಸರ್ಕಾರಿ ಗೋಮಾಳವಾಗಿದ್ದು, ಇಲ್ಲಿ ನಿವೇಶನ ಮಂಜೂರು ಮಾಡಲು ಗ್ರಾಮ ಪಂಚಾಯಿತಿಗೆ ಅಧಿಕಾರವಿಲ್ಲ. ಗಡಿ ಗುರುತಿಸಿಕೊಡುವಂತೆ ಸರ್ವೇ ಇಲಾಖೆ ಮತ್ತು ತಹಶೀಲ್ದಾರ್ಗೆ ಮನವಿ ಮಾಡಲಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.