ಬೆಂಗಳೂರು: ರಾಜ್ಯಸಭಾ ಅಭ್ಯರ್ಥಿಯಾಗಿರುವ ದಿಗ್ವಿಜಯ್ ಸಿಂಗ್ ಅವರು ನಮ್ಮ ಪಕ್ಷದ ರೆಬಲ್ ಶಾಸಕರ ಬಳಿ ಮತಯಾಚನೆಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದು ಬೆಂಗಳೂರು ಪೊಲೀಸರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರೊಡನೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಖಾಸಗಿ ರೆಸಾರ್ಟ್ನಲ್ಲಿರುವ ನಮ್ಮ ಪಕ್ಷದ ಮಧ್ಯಪ್ರದೇಶದ ಶಾಸಕರನ್ನು ಮತ ಕೇಳಲು ನಮ್ಮ ಹಿರಿಯ ಮುಖಂಡರಾದ ದಿಗ್ವಿಜಯ್ ಸಿಂಗ್ ರೆಸಾರ್ಟ್ಗೆ ಹೋಗಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಅವರು ರಾಜ್ಯಸಭೆಗೆ ಸ್ಪರ್ಧಿಸಿದ್ದಾರೆ. ನಮ್ಮ ಶಾಸಕರ ಬಳಿ ಮತ ಕೇಳುವ ಹಕ್ಕು ಅವರಿಗೆ ಇದೆ. ದಿಗ್ವಿಜಯ್ ಅವರು ಮತ ಕೇಳಲು ಯಾರ ಅಪ್ಪಣೆಯೂ ಬೇಕಿಲ್ಲ. ಹೀಗಾಗಿ ಅವರು ರೆಸಾರ್ಟ್ಗೆ ಹೋದರೆ ಭೇಟಿ ಮಾಡಲು ಅವಕಾಶ ಕೊಡದೇ ಪೊಲೀಸರು ಬಂಧಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ನಾವು ಕಮಿಷನರ್ ಹಾಗೂ ಡಿಜಿ ಬಳಿ ಅನುಮತಿ ಕೇಳಿದ್ದೆವು. ಪೊಲೀಸರ ಬಳಿಗೆ ನಾವು ಅರ್ಜಿ ತೆಗೆದುಕೊಂಡು ಹೋಗಬೇಕಾ. ಸಾರ್ವಜನಿಕ ಸ್ಥಳಗಳಲ್ಲಿ ಬರಬೇಡಿ ಅನ್ನೋದಕ್ಕೆ ಯಾವುದಾದರೂ ಕಾನೂನು ಇದೆಯಾ. ಮಧ್ಯಪ್ರದೇಶ ಶಾಸಕರನ್ನು ಫ್ರೀಯಾಗಿ ಬಿಡಿ, ಆನಂತರ ನಾವು ಮಾತನಾಡುತ್ತೇವೆ. ಹೊರಗಡೆಯಿಂದ ಬಂದಿರುವ ಶಾಸಕರಿಗೆ ಭದ್ರತೆ, ಎಸ್ಕಾರ್ಟ್ ಕೊಟ್ಟರೆ ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಈ ರೀತಿಯ ಬೆಳವಣಿಗೆ ಸರಿಯಲ್ಲವೆಂದು ಡಿಕೆಶಿ ಕಿಡಿಕಾರಿದರು.
ಇನ್ನು, ಈ ವಿಚಾರವಾಗಿ ಕೋರ್ಟ್ನಲ್ಲೂ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ರಾಜಕಾರಣಿಗಳ ರೀತಿ ನಡೆದುಕೊಳ್ಳಬೇಡಿ. ಈಗ ಪೊಲೀಸರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ಬಳಿಕ ನಮ್ಮ ರಾಜಕಾರಣವನ್ನು ನಾವು ಮಾಡುತ್ತೇವೆ. ದಿಗ್ವಿಜಯ್ ಸಿಂಗ್ ಅವರು ರೆಸಾರ್ಟ್ಗೆ ಹೋದಾಗ ಅಲ್ಲಿ 144 ಸೆಕ್ಷನ್ ಜಾರಿಯಾಗಿತ್ತಾ. ಇಲ್ಲ ಅವರ ಬಳಿ ವೆಪನ್ಸ್ ಏನಾದ್ರು ಇತ್ತಾ. ಅವರು ಕಾನೂನನ್ನು ಬ್ರೇಕ್ ಮಾಡಿದ್ರಾ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದರಲ್ಲದೆ, ಪೊಲೀಸರು ಮೊದಲು ಬಿಜೆಪಿ ಏಜೆಂಟ್ಗಳ ರೀತಿ ವರ್ತಿಸುವುದನ್ನು ಬಿಡಲಿ ಎಂದು ಗುಡುಗಿದರು.