ಬೆಂಗಳೂರು: ಕೊರೊನಾ ಹರಡುತ್ತಿರುವ ಹಿನ್ನೆಲೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಶಾಲಾ ಮಕ್ಕಳಿಗೆ ರಜೆ ಘೋಷಿಸಲಾಗಿದೆ. 1-9ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ-ಕ್ಷೀರಭಾಗ್ಯ ಯೋಜನೆ ಅನುಷ್ಠಾನದಲ್ಲಿ ಬದಲಾವಣೆ ಮಾಡಲಾಗಿದೆ.
ರಜಾ ದಿನಗಳಲ್ಲಿ ಬಿಸಿಯೂಟದ ಬದಲು ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳು/ಪೋಷಕರಿಗೆ ವಿತರಿಸಲು ಆದೇಶಿಸಲಾಗಿದೆ. ಬಿಸಿಯೂಟ ಪಡೆಯಲು ಮಕ್ಕಳು ಗುಂಪುಗಳಲ್ಲಿ ಬರುವುದರಿಂದ ವೈರಸ್ ಹರಡುವ ಭೀತಿ ಇದೆ. ಈ ಹಿನ್ನೆಲೆ ಕೆಲ ಬದಲಾವಣೆ ಮಾಡಲಾಗಿದೆ.
ಊಟ ನೀಡುವ ಬದಲು ಆಹಾರ ಪದಾರ್ಥ ನೀಡುವಂತೆ ಸೂಚಿಸಲಾಗಿದೆ. ಅಂದರೆ 1-5ನೇ ತರಗತಿ ಪ್ರತಿ ಮಗುವಿಗೆ ಪ್ರತಿನಿತ್ಯ 100 ಗ್ರಾಂ ಅಕ್ಕಿ, 50 ಗ್ರಾಂ ತೊಗರಿ ಬೆಳೆ, 6-10ನೇ ತರಗತಿ 150gm ಅಕ್ಕಿ, 75gm ತೊಗರಿ ಬೇಳೆ... ಈ ರೀತಿಯ ಲೆಕ್ಕಾಚಾರದಂತೆ ಒಂದೇ ಬಾರಿಗೆ ಆಹಾರ ಪದಾರ್ಥ ವಿತರಣೆ ಮಾಡುವಂತೆ ಆದೇಶಿಸಲಾಗಿದೆ.
ವಿತರಣೆ ವೇಳೆ ಮಕ್ಕಳ ಹೆಸರು, ತರಗತಿಯನ್ನು ನಮೂದಿಸಿ ಪೋಷಕರಿಂದ ಸ್ವೀಕೃತಿ ಸಹಿ ಮೂಲಕ ದಾಖಲೆ ತೆಗೆದುಕೊಳ್ಳುವುದು. ಶಾಲೆಯ ಎಲ್ಲಾ ಮಕ್ಕಳು/ಪೋಷಕರನ್ನು ಒಂದೇ ಬಾರಿಗೆ ಕರೆಯದೇ ಹಂತ ಹಂತವಾಗಿ ಅವರನ್ನು ಕರೆಸಿಕೊಂಡು ಆಹಾರ ಸಾಮಾಗ್ರಿಗಳನ್ನು ನೀಡುವಂತೆ ಸೂಚಿಸಲಾಗಿದೆ.