ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಶಾಸಕರೆಲ್ಲರ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಆರಂಭಿಸಿರುವ ಜನಧ್ವನಿ ಜಾಥಾಗೆ ಆರಂಭದಲ್ಲೇ ಅಪಶಕುನ ಎದುರಾಗಿದೆ.
ಜನದನಿ ಕಾರ್ಯಕ್ರಮಕ್ಕೆ ಚಾಲನೆ ಸಿಗುವ ಎರಡು ದಿನ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೋಲಾರದ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದರು. ಆದಾಗ್ಯೂ ಕೆಲ ಅಡೆತಡೆಗಳು ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೋಚರಿಸಿದವು. ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿ ಮುಂಭಾಗ ಸ್ಥಳವನ್ನು ಕಾಮಗಾರಿಗಾಗಿ ಅಗೆಯಲಾಗಿದ್ದು, ತಾತ್ಕಾಲಿಕವಾಗಿ ಮರಳಿನಿಂದ ಮುಚ್ಚಲಾಗಿತ್ತು. ಬಸ್ ಹಿಂಭಾಗದ ಚಕ್ರ ಮರಳಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಸ್ ಅಲ್ಲಿಂದ ತೆರವುಗೊಳಿಸುವ ಪ್ರಯತ್ನ ನಡೆಸಲಾಯಿತು. ವಿಶೇಷ ಜಾಕ್ ತರಿಸಿ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಅನಿವಾರ್ಯವಾಗಿ ಈ ಬಸ್ ಅನ್ನು ಬಿಟ್ಟು ಬೇರೆ ವಾಹನದಲ್ಲಿ ಕಾಂಗ್ರೆಸ್ ನಾಯಕರು ತೆರಳಿದರು.
ಬಿದ್ದು ಪೆಟ್ಟು ಮಾಡಿಕೊಂಡ ಮಹಿಳೆ: ಇನ್ನೊಂದೆಡೆ ಕೆಪಿಸಿಸಿ ಕಚೇರಿಯಲ್ಲಿ ಉಂಟಾದ ನೂಕು ನುಗ್ಗಲಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಬಿದ್ದು ಪೆಟ್ಟು ಮಾಡಿಕೊಂಡರು. ಕೆಪಿಸಿಸಿ ಕಚೇರಿ ನವೀಕರಣ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ಕೆಲವೆಡೆ ಕೆಲಸ ಅಪೂರ್ಣವಾಗಿದೆ. ಕೆಪಿಸಿಸಿ ಕಚೇರಿಯ ವರಾಂಡಾದಲ್ಲಿ ನಿಂತಿದ್ದ ಮಹಿಳೆ ಡಿಕೆ ಶಿವಕುಮಾರ್ ಆಗಮಿಸಿದ ಸಂದರ್ಭದಲ್ಲಿ ಉಂಟಾದ ನೂಕು ನುಗ್ಗಲಿನಿಂದಾಗಿ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ಬೆನ್ನಿಗೆ ಏಟಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಪಕ್ಷದ ಕಾರ್ಯಕ್ರಮ ಚಾಲನೆ ನೀಡುವ ಸಂದರ್ಭದಲ್ಲಿ ನಡೆದ ಕಾರಣ ಧಾರ್ಮಿಕ ನಂಬಿಕೆಯುಳ್ಳ ಪಕ್ಷದ ಕೆಲ ಮುಖಂಡರು ಇದನ್ನು ಅಪಶಕುನ ಎಂದು ತಮ್ಮಲ್ಲೇ ಮಾತನಾಡಿಕೊಂಡಿದ್ದಾರೆ.
ಎಲ್ಲ ಮುಗಿದ ನಂತರ ಕ್ಲೀನ್ಸರ್ ರಸ್ತೆಯ ಏಕಮುಖ ಸಂಚಾರ ದತ್ತ ಸಂಚರಿಸಿ ಜಾತಾ ಆರಂಭವಾದಾಗಲೂ ಕೆಲವರು ಅಚ್ಚರಿ ವ್ಯಕ್ತಪಡಿಸಿದರು. ಆದರೆ, ನಂತರ ತಿಳಿದು ಬಂದ ಸಂಗತಿ ಎಂದರೆ ಕೆಪಿಸಿಸಿ ಕಚೇರಿಯಿಂದ ಎಡಭಾಗಕ್ಕೆ ಹೊರಳಿದರೆ ಅದು ದೇವಮೂಲೆ ಎಂಬ ಕಾರಣಕ್ಕೆ ಪಕ್ಷದ ನಾಯಕರು ಹೆಜ್ಜೆ ಹಾಕುವ ಮೂಲಕ ಜಾಥಾಗೆ ಚಾಲನೆ ನೀಡಿದ್ದಾರೆ. ದೇವಮೂಲೆಯಲ್ಲಿ ತೆರಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವ ಕಾರ್ಯಕ್ಕೆ ಮುಂದಾದ ಕಾಂಗ್ರೆಸ್ ನಾಯಕರು, ರಸ್ತೆಯಲ್ಲಿ ಒಂದಿಷ್ಟು ದೂರ ಏಕಮುಖ ಮಾರ್ಗದಲ್ಲಿ ಸಂಚರಿಸಿ ದೇವನಹಳ್ಳಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಧಾರ್ಮಿಕ ಆಚರಣೆಯನ್ನು ಇತ್ತೀಚೆಗೆ ಹೆಚ್ಚಾಗಿ ಪಾಲಿಸುತ್ತಿರುವ ಕಾಂಗ್ರೆಸ್ ಪಕ್ಷ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಣತಿಯಂತೆ ಎಲ್ಲವನ್ನೂ ಮಾಡುತ್ತಿದೆ. ಇಂದಿನ ಎಲ್ಲ ನಿರ್ಧಾರಗಳು ಅವರ ಸೂಚನೆಯಂತೆ ನಡೆದಿದೆ. ಸಾಂಪ್ರದಾಯಿಕ ಪೂಜಾ ವಿಧಿ ವಿಧಾನದ ಮೂಲಕ ಜಾಥಾಗೆ ಕೆಪಿಸಿಸಿ ಕಚೇರಿಯಲ್ಲಿ ಚಾಲನೆ ನೀಡಲಾಗಿದೆ. ಆದಾಗ್ಯೂ ಎದುರಾಗಿರುವ ಸಣ್ಣ-ಪುಟ್ಟ ಘಟನೆಗಳನ್ನು ಅಪಶಕುನ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪಕ್ಷದ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ಸಂಚಾರ ದಟ್ಟಣೆ:
ಕೆಪಿಸಿಸಿ ಕಚೇರಿ ಮುಂಭಾಗ ಸಮಾರಂಭದ ವೇಳೆ ಸುಮಾರು ಒಂದರಿಂದ ಎರಡು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಸಮಸ್ಯೆ ಎದುರಾಯಿತು. ಇದಾದ ಬಳಿಕ ಜಾಥಾ ಸ್ಥಳದಿಂದ ತೆರಳಿದ ನಂತರ ಒಂದು ಗಂಟೆಗೂ ಹೆಚ್ಚುಕಾಲ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟರು. ಸ್ಮಾರ್ಟ್ ಸಿಟಿ ಕಾಮಗಾರಿ ಸಹ ಈ ಮಾರ್ಗದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರದಟ್ಟಣೆ ಸರ್ವೇ ಸಾಮಾನ್ಯವಾಗಿದೆ. ಇಂದು ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ದಟ್ಟಣೆ ಸಮಸ್ಯೆ ಇನ್ನಷ್ಟು ಹೆಚ್ಚಾಗಿತ್ತು.
ಕೆಪಿಸಿಸಿವತಿಯಿಂದ ದೇವನಹಳ್ಳಿಯಲ್ಲಿ ಜನಧ್ವನಿ ಜಾಥಾ:
ಕೆಪಿಸಿಸಿವತಿಯಿಂದ ಹಮ್ಮಿಕೊಂಡಿರುವ ಜನಧ್ವನಿ ಜಾಥಾ ದೇವನಹಳ್ಳಿ ಪಟ್ಟಣ ತಲುಪಿದ್ದು, ಜಾಥಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜನ ಸಾಗರವೇ ಹರಿದು ಬಂದಿದೆ. ಪಟ್ಟಣದ ರಸ್ತೆಯಲ್ಲಿ ಫ್ಲೇಕ್ಸ್ಗಳು ರಾರಾಜಿಸುತ್ತಿದ್ದು, ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಅಧಿಕ ಕಾರ್ಯಕರ್ತರು, 100 ಟ್ರ್ಯಾಕ್ಟರ್ಗಳು ಸಹ ಕಾರ್ಯಕ್ರಮದಲ್ಲಿ ಕಂಡು ಬಂದವು. ಗಣ್ಯರನ್ನು ಸ್ವಾಗತಿಸಲು ಬೃಹತ್ ಸೇಬಿನ ಹಾರ ಸಹ ಸಿದ್ಧವಾಗಿದೆ.