ಬೆಂಗಳೂರು : ಔಷಧಿ ಖರೀದಿ ವಿಚಾರದಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಮಗ್ರ ತನಿಖೆ ನಡೆಸುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಹಾಗೂ ಪ್ರತಿಪಕ್ಷ ಉಪನಾಯಕ ಡಾ. ಕೆ.ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆ ಆಯುಕ್ತರ ಮಟ್ಟದಲ್ಲಿ ರಾಜ್ಯಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಇ-ಟೆಂಡರ್ ಮೂಲಕ ಔಷಧಿ ಖರೀದಿ ಮಾಡಲಾಗುತ್ತಿದೆ.
ತಾಂತ್ರಿಕ ಸಮಿತಿ ಶಿಫಾರಸಿನ ಮೇರೆಗೆ ಅಗತ್ಯ ಇರುವ ಔಷಧಿಗಳನ್ನು ಖರೀದಿಸಲಾಗುತ್ತಿದೆ. ಎಲ್ 1 ಇರುವವರಿಗೆ ಟೆಂಡರ್ ನೀಡುತ್ತಿದ್ದೇವೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಆದಾಗ್ಯೂ, ಇಂತಹ ಪ್ರಕರಣ ಬೆಳಕಿಗೆ ಬಂದಿಲ್ಲ. ಇಲಾಖೆಯಲ್ಲಿ ಇಂತಹ ಅಕ್ರಮ ನಡೆದಿಲ್ಲ ಎಂದರು. ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ಕಳಪೆ ಔಷಧಿಯಿಂದಾಗಿ ಜಾನುವಾರು ಸಾಯುತ್ತಿವೆ.
ಇದರಿಂದ ರೈತರಿಗೆ ನಷ್ಟ ಆಗುತ್ತಿದೆ. ಔಷಧಿ ಖರೀರಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಇದನ್ನು ಸದನ ಸಮಿತಿ, ಎಸ್ಐಟಿ, ಸಿಐಡಿ ಅಥವಾ ಎಸಿಬಿ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು. ಸಭಾಪತಿ ಅವರು ಮಧ್ಯಪ್ರವೇಶಿ ಮಾಡಿ ತನಿಖೆ ಮಾಡಿಸಿ ಎಂದಾಗ ಸಚಿವರು ಅದಕ್ಕೆ ಸಹಮತ ವ್ಯಕ್ತ ಪಡಿಸಿದರು.
ಇದನ್ನೂ ಓದಿ: 2021ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿ ಪ್ರಕಟ
ಸಲೀಂ ಅಹಮದ್ ಪರವಾಗಿ ಪ್ರಕಾಶ್ ರಾಥೋಡ್ ಪ್ರಶ್ನೆ ಕೇಳಿ, ಪಶು ವೈದ್ಯಕೀಯ ಇಲಾಖೆಯಲ್ಲಿ ವೈದ್ಯರ ಹುದ್ದೆಗಳ ಕೊರತೆಯ ಬಗ್ಗೆ ಕೇಳಿದಾಗ ಈಗಾಗಲೇ 400ಕ್ಕೂ ಹೆಚ್ಚು ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ನೇಮಕವಾದವರನ್ನು ಖಾಲಿ ಇರುವ ಕಡೆಗೆ ಆದ್ಯತೆ ಮೇರೆಗೆ ನಿಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದ ಸಂದರ್ಭ ಸಚಿವ ಪ್ರಭು ಚೌಹಾಣ್ ಇತರ ಸಚಿವರೊಂದಿಗೆ ನಗುತ್ತಾ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಗೋವಿಂದರಾಜು, ಗಂಭೀರ ವಿಚಾರದ ಚರ್ಚೆ ನಡೆಯುತ್ತಿದೆ. ಆದರೆ, ಸಚಿವರು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಗುತ್ತಾ ಕುಳಿತಿದ್ದಾರೆ ಎಂದು ಛೇಡಿಸಿದರು. ಸಾವರಿಸಿಕೊಂಡ ಸಚಿವ ಪ್ರಭು ಚೌಹಾಣ್, ನಾನು ಗಂಭೀರವಾಗಿದ್ದೇನೆ. ನಗುತ್ತಿಲ್ಲ. ಸದಸ್ಯರ ಬೇಡಿಕೆ ಮೇರೆಗೆ ಇಲಾಖಾ ಮಟ್ಟದಲ್ಲಿ ತನಿಖೆ ಮಾಡಿಸುತ್ತೇನೆ ಎಂದು ಮತ್ತೊಮ್ಮೆ ಭರವಸೆ ನೀಡಿದರು.