ಬೆಂಗಳೂರು: ಹುಡುಗಿಯರಿಗೆ ಹೈಟೆಕ್ ಆಗಿ ವಂಚಿಸುತ್ತಿದ್ದ ಖತರ್ನಾಕ್ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದು, ಈತ 100ಕ್ಕೂ ಹೆಚ್ಚು ಯುವತಿಯರಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಜಹಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಆರೋಪಿ. ಈತನ ಮೇಲೆ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸದ್ಯ 6 ಪ್ರಕರಣಗಳು ದಾಖಲಾಗಿದೆ. ಆದರೆ ಪೊಲೀಸರ ಮಾಹಿತಿ ಪ್ರಕಾರ ಈತ 100ಕ್ಕೂ ಹೆಚ್ಚು ಯುವತಿಯರಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಈತ ಪ್ರತಿಷ್ಟಿತ ಮಾಲ್ಗಳ ಬಳಿ ಒಬ್ಬಂಟಿ ಮಹಿಳೆಯರಿಗೆ ತಾನು ಉದ್ಯಮಿ ಎಂಎಲ್ಎ ಮಗ ಎಂದು ಇಂಗ್ಲೀಷ್ನಲ್ಲಿ ಮಾತಾಡಿ ಐದು ಹತ್ತು ನಿಮಿಷದಲ್ಲಿ ಪಟಾಯಿಸುತ್ತಿದ್ದ. ಬಳಿಕ ಕಾರಿನಲ್ಲಿ ಕರೆದೊಯ್ದು ಲೈಗಿಂಕ ದೌರ್ಜನ್ಯ ಮತ್ತು ಅತ್ಯಾಚಾರವೆಸಗಿ ಮಹಿಳೆಯರ ಬಳಿ ಇದ್ದ ಹಣ ಮೊಬೈಲ್ಗಳನ್ನ ದೋಚುತ್ತಿದ್ದ.
ಯಾವೆಲ್ಲಾ ಪ್ರಕರಣ?
1. ಮಾಡೆಲಿಂಗ್, ನಟಿಯನ್ನಾಗಿ ಮಾಡುವ ಆಮಿಷವೊಡ್ಡಿ ಸುಲಿಗೆ, ಲೈಗಿಂಕ ಹಲ್ಲೆ :
ಎಂಜಿ ರಸ್ತೆಯ ಎಂಜಿ ಮಾಲ್ ಬಳಿ ಓರ್ವ ಹುಡುಗಿಯನ್ನ ಪರಿಚಯ ಮಾಡಿಕೊಂಡ ಈತ ಬಣ್ಣ ಬಣ್ಣದ ಮಾತನ್ನಾಡಿ ತನ್ನ ಕಾರಿನಲ್ಲಿ ಕೂರಿಸಿ ಆಕೆಯ ಬಳಿಯಿಂದಲೇ ಕಾರಿಗೆ ನಾಲ್ಕು ಸಾವಿರ ಪೆಟ್ರೋಲ್ ಹಾಕಿಸಿದ್ದನಂತೆ ನಂತರ ಹೆ.ಚ್.ಎಲ್. ವರ್ತೂರು, ಸರ್ಜಾಪುರ, ಬೆಳ್ಳಂದೂರು, ಮುಂತಾದ ಕಡೆ ಸುತ್ತಾಡಿಸಿ ನಂತ್ರ ಆಕೆಯ ಮೊಬೈಲ್ನಲ್ಲೆ ಓಯೋ ಮೂಲಕ ರೂಂ ಬುಕ್ ಮಾಡಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಬಿಟ್ಟು ಕಳುಹಿಸಿದ್ದ.
2. ಡ್ರಾಪ್ ಮಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ಮೋಸ :
ಮೇ ತಿಂಗಳಲ್ಲಿ ಹೈದರಾಬಾದ್ಗೆ ಹೋಗಲು ಬಸ್ಗೆ ಕಾಯುತ್ತಿದ್ದ ಮಹಿಳೆಯೊಂದಿಗೆ ನಯವಾಗಿ ಮಾತಾಡಿ ತಾನು ಹೈದರಾಬಾದ್ಗೆ ಹೋಗುತ್ತಿದ್ದು ಡ್ರಾಪ್ ಕೊಡುವುದಾಗಿ ತಿಳಿಸಿ ಪಟಾಯಿಸಿದ್ದ. ನಂತರ ವೈಟ್ ಫೀಲ್ಡ್ ಬಳಿ ಇರುವ ಫೀನಿಕ್ಸ್ ಮಾಲ್ಗೆ ಕರೆದೊಯ್ದು ಆಕೆಯ ಮಗನಿಗೆ ಗೊಂಬೆ ತರುವುದಾಗಿ ಡೆಬಿಟ್ ಕಾರ್ಡ್ ತೆಗೆದುಕೊಂಡು ಒಟ್ಟು 40200 ಗಳಷ್ಟು ಕಾರ್ಡ್ ಸ್ವೈಪ್ ಮಾಡಿ ಎಸ್ಕೇಪ್ ಆಗಿದ್ದ.
3. ದೊಡ್ಡ ಹುದ್ದೆ ಕೊಡಿಸುತ್ತೇನೆಂದು ಹೇಳಿ ಅತ್ಯಾಚಾರ :
ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿಆರ್ ಮಾಲ್ ಬಳಿ ನಿಂತಿದ್ದ ಯುವತಿಗೆ ತಾನು ಕಿರಣ್ ರೆಡ್ಡಿ ಎಂದು ಪರಿಚಯಿಸಿಕೊಂಡು ತನ್ನ ಕಂಪೆನಿಯಾದ ಮೀಡಿಯಾ ಮತ್ತು ಆಡ್ವರ್ಟೈಸ್ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದಿದ್ದ, ನಂತರ ಇಂದಿರಾನಗರ ಬಳಿ ಇರುವ ಪಬ್ನಲ್ಲಿ ಬಲವಂತವಾಗಿ ಕುಡಿಸಿ ಅಲ್ಲಿಂದ ಮೈಸೂರ್ ಬಳಿ ಇರುವ ಕಂಫರ್ಟ್ ಇನ್ ಹೋಟೆಲ್ಗೆ ಕರೆದೊಯ್ದು ಅತ್ಯಾಚಾರವೆಸಗಿ ಆಕೆಯ ದುಡ್ಡು ಲಪಾಟಯಿಸಿದ್ದ.
4. ಚೈನೈನಲ್ಲಿಯೂ ಮಹಿಳೆಗೆ ಮೋಸ :
ಚೈನೈನ ವೆಲ್ಲಚೇರಿ ಏರಿಯಾದಲ್ಲಿ ಮಹಿಳೆಯನ್ನು ಪರಿಚಯಿಸಿಕೊಂಡ ಈತ ಆಕೆಯನ್ನು ಫಿನಿಕ್ಸ್ ಮಾಲ್ಗೆ ಕರೆದುಕೊಂಡು ಹೋಗಿ ಅಲ್ಲಿರುವ ಮೊಬೈಲ್ ಶಾಪ್ನಲ್ಲಿ ಮಹಿಳೆಯ ಎಟಿಎಂ ಕಾರ್ಡ್ ನಿಂದ ಹಣ ಡ್ರಾ ಮಾಡಿ ಮೊಬೈಲ್ ಜೊತೆ ದುಡ್ಡು ಪಡೆದು ಎಸ್ಕೇಪ್ ಆಗಿದ್ದ.
5. ಮದುವೆಯಾಗುತ್ತೇನೆಂದು ನಂಬಿಸಿ ಅತ್ಯಾಚಾರ :
2017ರಲ್ಲಿ ಒಬ್ಬಹುಡುಗಿಯನ್ನು ಪರಿಚಯಿಸಿಕೊಂಡ ಈತ ನಂತರ ಆಕೆಯನ್ನ ಪ್ರೀತಿ ಮಾಡುವುದಾಗಿ ತಿಳಿಸಿ ತಮಿಳುನಾಡಿನ ಮಹಾಬಲಿಪುರನಲ್ಲಿರುವ ರೆಸಾರ್ಟ್ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿ ಬಳಿಕ ಆಕೆಯನ್ನು ಆಕೆಯ ದುಡ್ಡಲ್ಲೇ ಊಟಿ ಕೊಡೈಕೆನಲ್, ಗೋವಾ ಸುತ್ತಿಸಿ ಮಜಾ ಮಾಡಿ ಬಳಿಕ ಮೋಸ ಮಾಡಿದ್ದ.
ಇವಿಷ್ಟು ಅಲ್ಲದೇ ಸುಮಾರು 100ಕ್ಕೂ ಹೆಚ್ಚು ಯುವತಿಯರು, ಮಹಿಳೆಯರಿಗೆ ಈತ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ನೊಂದವರು ನೀಡಿದ ದೂರಿನ ಮೇರೆಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಆರೋಪಿ ಪತ್ತೆಗೆ ತಂಡ ಮಾಡಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೊಂದೆಡೆ ಈತ ತನ್ನ ಕಾರಿನಲ್ಲಿ ಒಳ ಉಡುಪು, ಕಾಂಡೋಮ್ ಬಾಕ್ಸ್ ಇಟ್ಟುಕೊಂಡು ಓಡಾಡುತ್ತಿದ್ದ ಎಂಬ ವಿಚಾರವೂ ಬಯಲಾಗಿದೆ. ಈತನನ್ನು ಬಂಧಿಸಿದ ಬಳಿಕ ಈತನ ವಿಚಾರಣೆ ನಡೆಸಿದಾಗ ಆರೋಪಿಯು ಎಂಬಿಎ ವ್ಯಾಸಂಗ ಮಾಡಿದ್ದು, ತಮಿಳುನಾಡಿನ ಚೈನೈನಲ್ಲಿರುವ ಗ್ರೀನ್ ಕೋಕನೆಟ್ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರ ಜೊತೆ ಮಜಾ ಮಾಡಲು ಈ ರೀತಿ ಮಾಡ್ತಿದ್ದ ಅನ್ನೊ ವಿಚಾರ ತಿಳಿದು ಬಂದಿದೆ.