ಬೆಂಗಳೂರು: ಪ್ರತಿದಿನ ಎರಡು ಸಾವಿರಕ್ಕೂ ಮೇಲ್ಪಟ್ಟು ಬರುತ್ತಿದ್ದ ಕೊರೊನಾ ಪಾಸಿಟಿವ್ ಸೋಂಕಿತರ ಸಂಖ್ಯೆ ಇಂದು ಸ್ವಲ್ಪ ಇಳಿಮುಖವಾಗಿದೆ. ಇಂದು 1,497 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ನಗರದ ಸೋಂಕಿತರ ಸಂಖ್ಯೆ 60,998ಕ್ಕೆ ಏರಿಕೆಯಾಗಿದೆ. ಹಾಗೆಯೇ ಇಂದು ಬಿಡುಗಡೆಯಾದವರ ಪ್ರಮಾಣ ಕೂಡ ಹೆಚ್ಚಾಗಿದ್ದು, 2,693 ಮಂದಿ ಗುಣಮುಖರಾಗಿ ವಾಪಸ್ಸಾಗಿದ್ದಾರೆ. ಈವರೆಗೆ ಒಟ್ಟು 23,603 ಮಂದಿ ಗುಣಮುಖರಾಗಿದ್ದು, 36,290 ಸಕ್ರಿಯ ಪ್ರಕರಣಗಳಿವೆ.
![Decrease in number of corona Cases in Bangalor City](https://etvbharatimages.akamaized.net/etvbharat/prod-images/kn-bng-04-bangalore-covid-7202707_03082020193716_0308f_1596463636_369.jpg)
ಇಂದು 27 ಮಂದಿ ಮೃತಪಟ್ಟಿರುವುದು ವರದಿಯಾಗಿದ್ದು, ಈವರೆಗೆ 1104 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ನಗರದಲ್ಲಿ ನಿನ್ನೆಯವರೆಗೆ 22,657 ಕಂಟೈನ್ಮೆಂಟ್ ಝೋನ್ಗಳನ್ನು ಮಾಡಲಾಗಿದೆ. ನಗರದ ದಕ್ಷಿಣ ವಲಯದಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳಿದ್ದು, ಪೂರ್ವ ಹಾಗೂ ಪಶ್ಚಿಮ ವಲಯಗಳಲ್ಲೂ ಅತಿಹೆಚ್ಚು ಕೊರೊನಾ ಪ್ರಕರಣಗಳಿವೆ.
ದಕ್ಷಿಣದಲ್ಲಿ 6,717 ಕಂಟೈನ್ಮೆಂಟ್ ಝೋನ್ಗಳಿದ್ದು, ಪೂರ್ವದಲ್ಲಿ 4,697, ಪಶ್ಚಿಮದಲ್ಲಿ 3,566, ಬೊಮ್ಮನಹಳ್ಳಿಯಲ್ಲಿ 2,468, ಮಹಾದೇವಪುರದಲ್ಲಿ 1,775, ಆರ್ಆರ್ನಗರದಲ್ಲಿ 1,960, ಯಲಹಂಕದಲ್ಲಿ 1,056 , ದಾಸರಹಳ್ಳಿಯಲ್ಲಿ 418 ನಿಯಂತ್ರಿತ ವಲಯಗಳಿವೆ. ಕೋವಿಡ್ ಪಾಸಿಟಿವ್ ರೋಗಿಗಳ ಒಟ್ಟು 2,60,567 ಸಂಪರ್ಕಿತರನ್ನು ಈವರೆಗೆ ಪತ್ತೆ ಹಚ್ಚಲಾಗಿದೆ.
ಇಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಗರದಲ್ಲಿ ಕೊರೊನಾ ಗುಣಲಕ್ಷಣಗಳಿರುವವರಿಗೆ ಶೀಘ್ರ ಚಿಕಿತ್ಸೆ ಸಿಗುವಂತೆ ಮಾಡಲು ಶೀಘ್ರ ಹಾಸಿಗೆ ಹಂಚಿಕೆಯ ನಿರ್ವಹಣೆ ಕುರಿತು ಐಎಎಸ್ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.