ಬೆಂಗಳೂರು : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮಸ್ಥರು ಉಡುಗೊರೆಯಾಗಿ ನೀಡಿದ್ದ ಬಂಗಾರದ ಕಿರೀಟವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಮೂಲಕ ಬಂಗಾರದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸಿದರು. ನಂತರ ಮಾತನಾಡಿದ ಅವರು, ತಮ್ಮ ಹುಟ್ಟೂರು ಕಾರಜೋಳ ಗ್ರಾಮದ ಇಡೀ ಜನರೆಲ್ಲರೂ ಅತ್ಯಂತ ಪ್ರೀತಿ, ಅಭಿಮಾನದಿಂದ 140 ಗ್ರಾಂ ಬಂಗಾರದ ಕಿರೀಟ ಉಡುಗೊರೆಯಾಗಿ ಕೊಟ್ಟಿದ್ದರು. ಅದನ್ನು ಇಂದು ಸರ್ಕಾರಕ್ಕೆ ಸಲ್ಲಿಸಿದ್ದಾಗಿ ತಿಳಿಸಿದರು.
ಮಾಜಿ ಸಚಿವರಿಗೆ ಬಲವಂತವಾಗಿ ಚಿನ್ನದ ಕಿರೀಟ ತೊಡಿಸಿದ ಗ್ರಾಮಸ್ಥರು..
ಗ್ರಾಮದ ಅಭಿವೃದ್ಧಿಗಾಗಿ ಅತ್ಯುತ್ತಮ ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸಿದ್ದಕ್ಕಾಗಿ ಮತ್ತು ತಮ್ಮೂರಿನ ಮನೆಯ ಮಗ ಉಪಮುಖ್ಯಮಂತ್ರಿಯಾಗಿದ್ದಕ್ಕಾಗಿ ಜನ ಈ ಬಂಗಾರದ ಕಿರೀಟ ತೊಡಿಸಿದ್ದರು. ಕಳೆದ 6 ವರ್ಷಗಳಿಂದ ಸನ್ಮಾನ ಮಾಡಿ, ಸಮರ್ಪಿಸಲು ಪ್ರಯತ್ನಿಸಿದ್ದರು.
ನವೆಂಬರ್ 23ರಂದು ಈ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಒತ್ತಾಯ ಪೂರ್ವಕವಾಗಿ ಅಭಿಮಾನ, ಪ್ರೀತಿ ವಿಶ್ವಾಸ, ಗೌರವದಿಂದ ಸನ್ಮಾನಿಸಿ ಈ ಚಿನ್ನದ ಕಿರೀಟ ಸಮರ್ಪಿಸಿದ್ದರು. ಈ ಸನ್ಮಾನವು ಸರ್ಕಾರಕ್ಕೆ ಸಲ್ಲುತ್ತದೆ.
ಈ ಹಿನ್ನೆಲೆಯಲ್ಲಿ ಈ ಬಂಗಾರದ ಕಿರೀಟವನ್ನು ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಮೂಲಕ ಸರ್ಕಾರಕ್ಕೆ ಒಪ್ಪಿಸಿರುವುದಾಗಿ ತಿಳಿಸಿದರು. ಪ್ರೀತಿ, ವಿಶ್ವಾಸದಿಂದ ಸನ್ಮಾನಿಸಿದ ಕಾರಜೋಳ ಗ್ರಾಮದ ಸಮಸ್ತ ಗ್ರಾಮಸ್ಥರಿಗೆ ಉಪಮುಖ್ಯಮಂತ್ರಿ ಕಾರಜೋಳ ಕೃತಜ್ಞತೆ ಸಲ್ಲಿಸಿದರು.