ಬೆಂಗಳೂರು: ಪಡೆದ ಗುತ್ತಿಗೆಯನ್ನು ಅನುಷ್ಠಾನಕ್ಕೆ ತರದೇ ಉಪಗುತ್ತಿಗೆ ಕೊಟ್ಟಿದ್ದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರಕಟಿಸಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ, ಟೆಂಡರ್ ಪಡೆದವರು ಕೆಲಸ ಮಾಡುತ್ತಿಲ್ಲ, ಸಬ್ ಕಾಂಟ್ರ್ಯಾಕ್ಟ್ ಕೊಡುತ್ತಿದ್ದಾರೆ ಎನ್ನುವ ನಾರಾಯಣಸ್ವಾಮಿ ಹಾಗೂ ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಟೆಂಡರ್ ಪಡೆದು ಮತ್ತೊಬ್ಬರಿಗೆ ಸಬ್ ಟೆಂಡರ್ ಕೊಟ್ಟಲ್ಲಿ ಗುಣಮಟ್ಟ ಹಾಳಾಗುತ್ತದೆ ಹಾಗಾಗಿ ಸಬ್ ಕಾಂಟ್ರಾಕ್ಟ್ ಕೊಟ್ಟಿದ್ದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೊರೊನಾದಿಂದ ಸಮಸ್ಯೆ ಆಗಿದೆ ಎನ್ನುವುದು ನಿಜ, ಆದರೂ ನಾವು ನಿಗದಿಪಡಿಸಿದ ಕಾಲದಲ್ಲಿಯೇ ಟೆಂಡರ್ ಕಾಮಗಾರಿ ಮುಗಿಸದೇ ಇದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅವರ ಟೆಂಡರ್ ಅಮಾನತು ಮಾಡುವ ಹಾಗೂ ಸಬ್ ಟೆಂಟರ್ ಖಚಿತವಾದಲ್ಲಿ ಕಪ್ಪು ಪಟ್ಟಿಗೆ ಸೇರಿಸುವ ಭರವಸೆ ನೀಡಿದರು.
ಟೆಂಡರ್ ಕರೆದು ಕೆಲಸ ಮಾಡಲು ಸಮಯವಾಗುವ ಕಾಮಗಾರಿಗಳು, ತುರ್ತು ಕಾರ್ಯ ಮಾಡಲು ನಿರ್ಮಿತಿ ಕೇಂದ್ರ ಮತ್ತು ಲ್ಯಾಂಡ್ ಆರ್ಮಿ ರಚಿಸಲಾಗಿದೆ. ಅವುಗಳಲ್ಲಿ ಲೋಪದೋಷ ಒಪ್ಪಿಕೊಳ್ಳುತ್ತೇನೆ, ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ, ಮಧ್ಯ ಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಿರ್ಮಿತ ಕೇಂದ್ರ, ಲ್ಯಾಂಡ್ ಆರ್ಮಿಗಳು ಸರ್ಕಾರಿ ಏಜೆನ್ಸಿಗಳು, ಇವೇ ಸಬ್ ಕಾಂಟ್ರಾಕ್ಟ್ ಕೊಡುತ್ತಿವೆ, ಪರ್ಸಂಟೇಜ್ ಪಡೆದು ಸಬ್ ಕಾಂಟ್ರಾಕ್ಟ್ ಕೊಡುತ್ತಿವೆ. ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿ ಬಳಿ ಒಂದು ಹಾರೆ, ಗುದ್ದಲಿ ಕೂಡ ಇಲ್ಲ. ಎಲ್ಲಾ ಪರ್ಸಂಟೇಜ್ ಪಡೆದರೆ ಗುಣಮಟ್ಟ ಏನಾಗಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಸದಸ್ಯ ಸಂದೇಶ ನಾಗರಾಜ್, ಲ್ಯಾಂಡ್ ಆರ್ಮಿ, ನಿರ್ಮಿತ ಕೇಂದ್ರಗಳನ್ನೇ ಮುಚ್ಚುವುದು ಒಳ್ಳೆಯದು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಕಾರಜೋಳ, ಲೋಪದೋಷ ಕಂಡು ಬಂದಲ್ಲಿ ಸರಿಪಡಿಸಬೇಕು, ಅದರ ಬದಲು ಮುಚ್ಚುವುದು ಸರಿಯಲ್ಲ, ಲೋಪ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.