ಬೆಂಗಳೂರು: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಡಿ ಕೆ ಶಿವಕುಮಾರ್, ತಮ್ಮ ಹೋರಾಟ ಹಾಗೂ ಬದುಕಿನ ಮೂಲಕ ದೇಶದ ಯುವ ಸಮುದಾಯಕ್ಕೆ ಅವರು ಉತ್ಕೃಷ್ಟ ಮಾದರಿಯಾಗಿದ್ದರು ಎಂದು ಬಣ್ಣಿಸಿದ್ದಾರೆ. ಮಾತೃ ಹೃದಯ, ದಿಟ್ಟತನ ಎರಡೂ ಮೇಳೈಸಿದ್ದ ಸುಷ್ಮಾ ಸ್ವರಾಜ್ ಅವರು ಚುರುಕುಮತಿ ಹಾಗೂ ಧೀರೋದಾತ್ತ ರಾಜಕಾರಣಿ ಆಗಿದ್ದರು. ಹೀಗಾಗಿಯೇ ಸಣ್ಣ ವಯಸ್ಸಿನಲ್ಲೇ ಶಾಸನಸಭೆ ಪ್ರವೇಶಿಸಿದರು. ಪಕ್ಷ, ತತ್ವ-ಸಿದ್ದಾಂತ ಮೀರಿ ಸರ್ವರನ್ನೂ ಒಳಗೊಳ್ಳುವ ಅವರ ಹೃದಯ ವೈಶಾಲ್ಯ, ಸಮನ್ವಯ ಭಾವ ಎಲ್ಲರ ಮನಗೆದ್ದಿತ್ತು. ನೇರ ನಡೆ-ನುಡಿಗೆ ಹೆಸರಾಗಿದ್ದ ಅವರು ಉತ್ತಮ ಸಂಸದೀಯ ಪಟುವಾಗಿದ್ದರು. ಕೇಂದ್ರ ಸಚಿವ ಸ್ಥಾನ, ದಿಲ್ಲಿ ಮುಖ್ಯಮಂತ್ರಿ ಪದವಿ ಸೇರಿದಂತೆ ತಾವು ವಹಿಸಿಕೊಂಡ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಂಥ ಸುಷ್ಮಾ ಸ್ವರಾಜ್ ಅವರ ಅಗಲಿಕೆ ಅತೀವ ನೋವು ತಂದಿದೆ ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರ ನಿಧನ ಇಡೀ ದೇಶಕ್ಕೆ ಭರಿಸಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಬಂಧುಗಳು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಅವರು ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಖರ್ಗೆ ಸಂತಾಪ : ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಖರ್ಗೆ, ಸುಮಾರು 25 ವರ್ಷದಿಂದ ಸುಷ್ಮಾ ಸ್ವರಾಜ್ ಅವರನ್ನು ಹತ್ತಿರದಿಂದ ನೋಡಿದ್ದೇನೆ. ನಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಪ್ರತಿ ಪಕ್ಷದ ನಾಯಕಿಯಾಗಿದ್ದರು. ಯಾವಾಗಲೂ ಗೌರವದಿಂದ ನನ್ನನ್ನು ಮಾತಾಡಿಸುತ್ತಿದ್ದರು. ಪಕ್ಷ ಪಂಗಡ ಮರೆತು ಪಕ್ಷಾತೀತವಾಗಿ ಹಿರಿಯರಿಗೆ ಗೌರವ ನೀಡುವ ವ್ಯಕ್ತಿತ್ವ ಅವರದ್ದಾಗಿತ್ತು. ಸದನದ ಒಳಗೆ, ಹೊರಗೆ ಭೇಟಿಯಾದಾಗ ಅವರು ನಿಜವಾಗಲೂ ಉತ್ತಮ ಹೃದಯವಂತಿಕೆಯಿಂದ ನಡೆದುಕೊಳ್ಳುತ್ತಿದ್ದರು. ಇಂತಹ ನಾಯಕಿ ಇಷ್ಟು ಬೇಗ ನಮ್ಮನ್ನು ಅಗಲಿ ಹೋಗಿರುವುದು ತೀವ್ರ ನೋವು ತಂದಿದೆ ಎಂದು ಹೇಳಿದರು.