ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಹೆಂಡತಿ ಎದುರೇ ಟೆಲಿಕಾಂ ನಿವೃತ್ತ ನೌಕರನನ್ನು ಕೋಳಿ ವ್ಯಾಪಾರಿ ಹಾಗೂ ಆತನ ಪುತ್ರ ಕೊಲೆ ಮಾಡಿದ್ದಾರೆ. ಜೆ.ಪಿ. ನಗರ 1ನೇ ಹಂತದ ನಿವಾಸಿ ಕೆ.ವೆಂಕಟೇಶಪ್ಪ (76) ಮೃತ ನಿವೃತ್ತ ನೌಕರ. ಇಂದು ಮಧ್ಯಾಹ್ನ 1 ಗಂಟೆಯಲ್ಲಿ ಕೃತ್ಯ ನಡೆದಿದೆ. ಬಸವೇಶ್ವರನಗರದ ಕೋಳಿ ಅಂಗಡಿ ಮಾಲೀಕ ನಾಗರಾಜು ಮತ್ತು ಈತನ ಪುತ್ರ ಅಭಿಷೇಕ್ ಶಂಕಿತ ಆರೋಪಿ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟೆಲಿಕಾಂ ಕಂಪನಿ ನಿವೃತ್ತ ನೌಕರ ವೆಂಕಟೇಶಪ್ಪ, ಜೆ.ಪಿ.ನಗರ ಮತ್ತು ಬಸವೇಶ್ವರ ನಗರದಲ್ಲಿ ಸ್ವಂತ ಮನೆಗಳನ್ನು ಹೊಂದಿದ್ದರು. ಜೆ.ಪಿ. ನಗರದ ಮನೆಯಲ್ಲಿ ವೆಂಕಟೇಶಪ್ಪ, ತನ್ನ ಪತ್ನಿ ಮಂಜುಳಾ ಜೊತೆಗೆ ನೆಲೆಸುತ್ತಿದ್ದರು. ಮೊದಲ ಮಹಡಿಯಲ್ಲಿ ಮೊದಲ ಪುತ್ರ ಶ್ರೀಧರ್ ಮತ್ತು 2ನೇ ಮಹಡಿಯಲ್ಲಿ ಹರೀಶ್ ಕುಟುಂಬ ವಾಸವಾಗಿದೆ.
ಆರೋಪಿಗಳು ಹಾಗೂ ವೆಂಕಟೇಶಪ್ಪ ನಡುವೆ ಜಟಾಪಟಿ: ಬಸವೇಶ್ವರ ನಗರದಲ್ಲಿ ಇರುವ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಇಲ್ಲಿನ ಮನೆಯ ಮುಂದೆ ಆರೋಪಿತರು ಕೋಳಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯಿಂದ ದುರ್ವಾಸನೆ ಬರುತ್ತಿದೆ ಎಂದು ಬಾಡಿಗೆದಾರರು ಮತ್ತು ಅಕ್ಕಪಕ್ಕದ ನಿವಾಸಿಗಳು ವೆಂಕಟೇಶಪ್ಪಗೆ ದೂರು ನೀಡಿದ್ದರು. ಈ ಬಗ್ಗೆ ವೆಂಕಟೇಶಪ್ಪ, ಕೋಳಿ ಅಂಗಡಿ ಮಾಲೀಕನಿಗೆ ಖಾಲಿ ಮಾಡುವಂತೆ ತಾಕೀತು ಮಾಡಿದ್ದರು. ಇಲ್ಲವಾದರೆ, ಬಿಬಿಎಂಪಿಗೆ ದೂರು ಕೊಡುವುದಾಗಿ ಎಚ್ಚರಿಕೆ ಸಹ ಕೊಟ್ಟಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಆರೋಪಿಗಳು ಮತ್ತು ವೆಂಕಟೇಶಪ್ಪ ನಡುವೆ ಜಟಾಪಟಿ ನಡೆದಿತ್ತು.
ಜಗಳ ಕೊಲೆಯಲ್ಲಿ ಅಂತ್ಯ: ಸೋಮವಾರ ಬೆಳಗ್ಗೆ ಎಂದಿನಂತೆ ವೆಂಕಟೇಶಪ್ಪ ಅವರ ಮಕ್ಕಳು ಕೆಲಸಕ್ಕೆ ಹೋಗಿದ್ದರು. ವೃದ್ಧ ದಂಪತಿ ಮನೆಯಲ್ಲಿ ಇದ್ದರು. ಮಧ್ಯಾಹ್ನ 1 ಗಂಟೆಯಲ್ಲಿ ಮನೆಗೆ ನುಗ್ಗಿದ ಆರೋಪಿಗಳು, ಏಕಾಏಕಿ ಜಗಳ ತೆಗೆದು ಮಂಜುಳಾ ಅವರ ಎದುರೇ ವೆಂಕಟೇಶಪ್ಪನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಮಂಜುಳಾ ಅವರ ಕೂಗಾಟದ ಸದ್ದು ಕೇಳಿ ಸ್ಥಳೀಯರು ಬಂದು ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ವೃದ್ಧ ಅಸುನೀಗಿದ್ದಾರೆ.
ವಿಷಯ ತಿಳಿದ ಜೆ.ಪಿ. ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Crime: ಚಿಂದಿ ಮಾರಾಟದ ₹ 450 ಹಂಚಿಕೆ ವೇಳೆ ಜೊತೆಗಾರನನ್ನು ಹತ್ಯೆಗೈದಿದ್ದ ಆರೋಪಿ ಅರೆಸ್ಟ್