ಬೆಂಗಳೂರು: ಸಾಹಿತಿ, ಹಿರಿಯ ಪತ್ರಕರ್ತ ಹಾಗೂ ಶತಾಯುಷಿ ಡಾ.ಪಾಟೀಲ್ ಪುಟ್ಟಪ್ಪ (ಪಾಪು) ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಲಾಯಿತು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಪಾಟೀಲ ಪುಟ್ಪಪ್ಪ ಅವರ ನಿಧನದ ಸುದ್ದಿಯನ್ನ ಸದನಕ್ಕೆ ತಿಳಿಸಿ, ವಿಷಾದ ವ್ಯಕ್ತಪಡಿಸಿದರು. 1919ರ ಜನವರಿ 14ರಂದು ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದ ಪಾಪು, ಕಾನೂನು ಪದವೀಧರರಾಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಪತ್ರಿಕೋದ್ಯಮ ಶಿಕ್ಷಣ ಪಡೆದಿದ್ದ ಅವರು ನನ್ನ ನಾಡು ಎಂಬ ಹಸ್ತ ಪತ್ರಿಕೆ ಆರಂಭಿಸಿದ್ದರು.
ಸಂಪಾದಕರಾಗಿಯೇ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಂತರ ತಮ್ಮದೇ ಆದ ಸಾಪ್ತಾಹಿಕ ಪ್ರಪಂಚ ಎಂಬ ಪತ್ರಿಕೆಯನ್ನು ಆರಂಭಿಸಿದ್ದರು. ಚಲೇಜಾವ್ ಚಳವಳಿಯಲ್ಲಿ ಒಂದು ವರ್ಷ ಭೂಗತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. 70ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದರು ಇಂತಹ ಹತ್ತು ಹಲವು ಘಟನೆಗಳನ್ನು ಸದನದಲ್ಲಿ ನಾಯಕರು ಮೆಲಕು ಹಾಕಿದರು.
ಸ್ಮಾರಕ ನಿರ್ಮಾಣ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪಾಟೀಲ ಪುಟ್ಟಪ್ಪ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ಸಲಹೆ ಮಾಡಿದರು. ತಾವು ಮುಖ್ಯಮಂತ್ರಿಯಾಗಿದ್ದಾಗ 2-3 ಬಾರಿ ಭೇಟಿಯಾಗಿದ್ದೆ. ಬೆಂಗಳೂರಿಗೆ ಬಂದಾಗ ಗಾಂಧಿ ಭವನದಲ್ಲೇ ಉಳಿದುಕೊಳ್ಳುತ್ತಿದ್ದರು ಎಂದು ಪಾಪು ನಡುವಿನ ಒಡನಾಟದ ಘಟನೆಯನ್ನು ಸ್ಮರಿಸಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಜೀವನದುದ್ದಕ್ಕೂ ಬಸವ ತತ್ತ್ವದತ್ವದಲ್ಲಿ ಬದುಕಿದವರು ಎಂದರು.
ಶಾಸಕ ಹೆಚ್.ಕೆ.ಪಾಟೀಲ್, ಶಾಸಕ ಆರ್.ವಿ.ದೇಶಪಾಂಡೆ, ಸಚಿವ ಜೆ.ಸಿ.ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ, ಡಾ.ಅನ್ನದಾನಿ ಮತ್ತಿತರರು ಪಾಟೀಲ್ ಪುಟ್ಟಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ನಂತರ ಒಂದು ನಿಮಿಷ ಮೌನಾಚರಣೆ ಆಚರಿಸಲಾಯಿತು. ಸದನದಲ್ಲಿ ಮಂಡಿಸಿದ ಸಂತಾಪ ಸೂಚಕ ನಿರ್ಣಯದ ಪ್ರತಿಯನ್ನು ಪಾಟೀಲ ಪುಟ್ಟಪ್ಪ ಅವರ ಕುಟುಂಬದವರಿಗೆ ಕಳುಹಿಸಿಕೊಡುವುದಾಗಿ ಸಭಾಧ್ಯಕ್ಷರು ತಿಳಿಸಿದರು.