ಬೆಂಗಳೂರು: ಮಹದೇವಪುರ ರಿಂಗ್ ರಸ್ತೆ ಬಳಿ ಇರುವ ಲೌರಿ ಮೆಮೋರಿಯಲ್ ಶಾಲೆಯಲ್ಲಿ ಮಹದೇವಪುರ ವಲಯ ಕೋವಿಡ್ -19 ಕಮಾಂಡ್ ಕೇಂದ್ರವನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಉದ್ಘಾಟಿಸಿದರು. ವಲಯ ವ್ಯಾಪ್ತಿಯಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಕೇಂದ್ರ (2301010123010102) ತೆರೆದರು.
ಕೊರೊನಾ ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸುವಾಗ ವಿಳಂಬವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮಹದೇವಪುರ ವಲಯದ 17 ಬಿಬಿಎಂಪಿ ವಾರ್ಡ್ ಹಾಗೂ 11 ಪಂಚಾಯಿತಿಗಳಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಬರಬಾರದು ಎಂದು ಕೋವಿಡ್- 19 ಕೇಂದ್ರ ತೆರೆಯಲಾಗಿದೆ.
ಮಹದೇವಪುರ ವಲಯದ ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು 40 ಆ್ಯಂಬುಲೆನ್ಸ್ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಪ್ರತಿಯೊಂದು ವಾರ್ಡ್ಗೆ ಎರಡು ಆ್ಯಂಬುಲೆನ್ಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಪಂಚಾಯಿತಿಗಳಿಗೆ ಒಂದು ಆ್ಯಂಬುಲೆನ್ಸ್ ಆಯೋಜನೆ ಮಾಡಲಾಗಿದೆ. ಆ್ಯಂಬುಲೆನ್ಸ್ ವಾಹನಗಳಿಗೆ ವಲಯದ ಮೂರು ಕಡೆ ನಿಲ್ದಾಣಗಳನ್ನು ಮಾಡಲಾಗಿದೆ.
ಗಂಟಲ ದ್ರವದ ಮಾದರಿಗಳ ಸಂಗ್ರಹಕ್ಕೆ ಮತ್ತು ಅವುಗಳನ್ನು ಪ್ರಯೋಗಾಲಯಗಳಿಗೆ ರವಾನಿಸಲು ಮತ್ತು ಸೋಂಕಿತರೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲು ಪ್ರತ್ಯೇಕ ವಾಹನಗಳನ್ನು ವ್ಯವಸ್ಥೆಗೊಳಿಸಲು ತೀರ್ಮಾನಿಸಲಾಗಿದೆ.
ಸೋಂಕು ದೃಢಪಟ್ಟವರ ಬಳಿಗೆ ಆ್ಯಂಬುಲೆನ್ಸ್ ಕಳುಹಿಸುವ ವ್ಯವಸ್ಥೆ ನಿರ್ವಹಿಸುವ ಸಲುವಾಗಿ ಲೌರಿ ಮೆಮೋರಿಯಲ್ ಶಾಲೆ ಕೋವಿಡ್ ಕೇಂದ್ರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ ಹಾಗೂ ಸೋಂಕಿತರನ್ನು ಕರೆದೊಯ್ಯುವ ಆ್ಯಂಬುಲೆನ್ಸ್ ಗಳ ಮೇಲೆ ನಿಗಾ ವಹಿಸಲು ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ.