ಬೆಂಗಳೂರು: ಬ್ಯಾಂಕಿಂಗ್ ನಿಯಮಾವಳಿ ತಿದ್ದುಪಡಿಯಲ್ಲಿ ಸಹಕಾರ ಬ್ಯಾಂಕ್ಗಳನ್ನು ತರಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಬಜೆಟ್ ಬಳಿಕದ ಉದ್ದೇಶಿತ 'ಉದ್ದಿಮಿ ಪ್ರತಿನಿಧಿಗಳ ಸಂವಾದ'ದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಎಲ್ಲ ವಿಧದ ಕ್ರಮಗಳನ್ನು ಕೈಗೊಳ್ಳಲಾಗಿದೆ. ತ್ವರಿತ ಹಾಳಾಗುವ ಕೆಲವು ಕೃಷಿ ಉತ್ಪನ್ನಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಉತ್ಪನ್ನಗಳ ಬೆಲೆ ಏರಿಕೆ ನಿಯಂತ್ರಣದಲ್ಲಿದೆ ಎಂದರು.
ರಾಜ್ಯಗಳ ಜಿಎಸ್ಟಿ ಪರಿಹಾರದ 2 ಹಂತ ವಿತರಣೆ:
ರಾಜ್ಯಗಳಿಗೆ ಸೇರಬೇಕಾದ ಜಿಎಸ್ಟಿ ನಷ್ಟ ಪರಿಹಾರದ ಬಾಕಿಯನ್ನು ಎರಡು ಕಂತುಗಳಲ್ಲಿ ವಿತರಿಸಲಾಗುತ್ತದೆ. 15ನೇ ಹಣಕಾಸು ಆಯೋಗದಲ್ಲೂ ಕರ್ನಾಟಕಕ್ಕೆ ನೀಡಿರುವ ಅನುದಾನದ ಪ್ರಮಾಣ ಹೆಚ್ಚಳವಾಗಿದೆ. ನರೇಗಾ ಯೋಜನೆಯಡಿ ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ. ರಾಜ್ಯದ ಪಾಲಾದ 350 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆಗೆ ಕೇಂದ್ರ ರಾಜ್ಯ ಸರ್ಕಾರಗಳು ಕ್ರಮವಾಗಿ ಶೇ 20 ಮತ್ತು ಶೇ 20ರಷ್ಟು ವೆಚ್ಚಭರಿಸುತ್ತವೆ. ಉಳಿದ ಶೇ 60ರಷ್ಟು ಪಾಲನ್ನು ಹೊರ ಸಾಲದ ಮೂಲಕ ಹೊಂದಾಣಿಕೆ ಮಾಡಲಾಗುತ್ತದೆ. ಅದಕ್ಕೂ ಕೂಡ ಕೇಂದ್ರ ಸರ್ಕಾರವೇ ಭರವಸೆ ನೀಡಲು ಸಿದ್ದವಿದೆ ಎಂದರು.
ಮಾರ್ಚ್ 31ರಂದು ಸಂಸತ್ತಿನಲ್ಲಿ ಅನುಮೋದನೆಗೊಂಡ ಬಳಿಕ ಕೇಂದ್ರ ಹಣಕಾಸು ಸಚಿವಾಲಯ ಹಂತ- ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತದೆ. ಹಿಂದಿನ ಬಜೆಟ್ಗಳಲ್ಲಿ ಇದರ ಬಗ್ಗೆ ಯಾವ ಭರವಸೆ ನೀಡಲಾಗಿತ್ತೋ ನನಗೆ ಗೊತ್ತಿಲ್ಲ. ಆದರೆ ನನ್ನ ಬಜೆಟ್ ಅವಧಿಯಲ್ಲಿ ಘೋಷಣೆಯಾದ ಯೋಜನೆಗಳ ಅನುಷ್ಠಾನ ನನ್ನ ಜವಾಬ್ದಾರಿ ಎಂದು ಹೇಳಿದರು.
ಟೆಲಿಕಾಂ ಬಿಕಟ್ಟು:
ಬಿಎಸ್ಎನ್ಎಲ್ ಖಾಸಗೀಕರಣದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಟೆಲಿಕಾಂ ಸಂಸ್ಥೆಗಳ ದರ ಸಮರದ ವಿಷಯದಲ್ಲಿ ಸಂಬಂಧಿತ ಟೆಲಿಕಾಂ ಸಂಸ್ಥೆಗಳಿಂದಲೇ ಪ್ರಸ್ತಾವನೆ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇನೆ. ಪ್ರಸ್ತಾವನೆ ಬಂದ ಬಳಿಕ ನಾವು ಮಧ್ಯಸ್ಥಿಕೆ ವಹಿಸಲು ಸಾಧ್ಯವಾಗುತ್ತದೆ ಎಂದರು.