ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಯನ್ನು ನಾಳೆಗೆ ಮುಂದೂಡುವ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಪ್ರೀಂಕೋರ್ಟ್ ಇಂದಿನ ವಿಚಾರಣೆ ವೇಳೆ ವಿಶ್ವಾಸಮತಯಾಚನೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಆದೇಶ ನೀಡದೇ ಇರುವುದರಿಂದ ನಾಳೆಯ ತನಕ ಮುಂದೂಡಲು ಇರುವ ಸಕಾರಣಗಳ ಶೋಧನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ ಮಾತನಾಡುತ್ತಾ ಸೋಮವಾರವೇ ವಿಶ್ವಾಸಮತ ಸಾಬೀತುಪಡಿಸಲು ಕಳೆದ ಶುಕ್ರವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಭರವಸೆ ನೀಡಿದ್ದರು. ಆದರೆ ನಿನ್ನೆ ಸಿಎಂ ವಿಶ್ವಾಸಮತ ಸಾಬೀತುಪಡಿಸಲು ಮುಂದಾಗಲಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ವಿಶ್ವಾಸ ಮತ ಯಾಚನೆಗೆ ಬುಧವಾರದ ತನಕ ಸಮಯ ನೀಡುವಂತೆ ಸಿಎಂ ಮನವಿ ಮಾಡಿದ್ದರು. ಆದರೆ ಇದಕ್ಕೆ ವಿಧಾನಸಭಾಧ್ಯಕ್ಷರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮತ್ತಷ್ಟು ಸಮಾಯಾವಕಾಶ ನೀಡಲು ಸಾದ್ಯವಿಲ್ಲ ಅದಕ್ಕೆ ಪ್ರತಿಪಕ್ಷದ ಒಪ್ಪಿಗೆಯೂ ಬೇಕಾಗುತ್ತದೆ ಎಂದು ತಿಳಿಸಿದ್ದರು. ಸೋಮವಾರದ ಕಲಾಪದಲ್ಲಿ ವಿಶ್ವಾಸಮತ ಯಾಚನೆಗೆ ಸಿದ್ದತೆ ನಡೆದಿದ್ದರೂ ಸಹ ವಿಶ್ವಾಸ ಮತ ಯಾಚನೆ ಕುರಿತ ಚರ್ಚೆಯೇ ರಾತ್ರಿ 11.30 ಆದರೂ ಪೂರ್ಣ ಗೊಳ್ಳಲಿಲ್ಲದ್ದರಿಂದ ಸದನದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.
ಸುಪ್ರೀಂಕೋರ್ಟ್ನಲ್ಲಿ ಇಂದು ನಡೆದ ಇಬ್ಬರು ಪಕ್ಷೇತರರ ಅರ್ಜಿ ವಿಚಾರಣೆ ಸಂದರ್ಭದಲ್ಲಿ ವಿಶ್ವಾಸ ಮತಯಾಚನೆ ಕುರಿತು ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಇದರ ನಡುವೆ ಸ್ಪೀಕರ್ ಪರ ವಕೀಲ ಅಭಿಷೇಕ್ ಸಿಂಘ್ವಿ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಇಂದು ಸಂಜೆ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುಪ್ರೀಂಕೋರ್ಟ್ ವಿಚಾರಣೆಯನ್ನೇ ರಕ್ಷಣೆಯಾಗಿ ಪಡೆದು ನಾಳೆ ವಿಶ್ವಾಸಮತ ಯಾಚನೆ ಮಾಡುವ ಬಗ್ಗೆ ಸ್ಪೀಕರ್ ಅವರಲ್ಲಿ ಮತ್ತೆ ಮನವಿ ಮಾಡುವ ಸಂಭವವಿದೆ. ಸ್ಪೀಕರ್ ಅವರು ಇಂದು ಸಂಜೆ ವೇಳೆಗೆ ಚರ್ಚೆ ಪೂರ್ಣಗೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಬೇಕು. ಸಂಜೆ 6 ಗಂಟೆಗೆ ವಿಶ್ವಾಸ ಮತ ಯಾಚನೆ ನಿರ್ಣಯವನ್ನು ಮತಕ್ಕೆ ಹಾಕುವುದಾಗಿ ಸಮಯವನ್ನು ನಿಗದಿಪಡಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಮತ್ತೊಂದು ಪ್ರಯತ್ನವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಳೆ ಸುಪ್ರೀಂಕೋರ್ಟ್ ಆದೇಶ ಗಮನಿಸಿ ವಿಶ್ವಾಸ ಮತ ಯಾಚನೆ ಮಾಡಲು ಒಲವು ಹೊಂದಿದ್ದಾರೆಂದು ಮೂಲಗಳು ತಿಳಿಸಿವೆ.