ಬೆಂಗಳೂರು : ಕನ್ನಡದ ನೆಲವನ್ನು ಸಮೃದ್ಧಗೊಳಿಸಲು ನಿಮ್ಮ ಸಾಮರ್ಥ್ಯದ ಶಕ್ತಿಯು ತಾಯಿ ನೆಲದತ್ತ ಹರಿದು ಬರಲಿ ಎಂದು ಸಿಎಂ ಯಡಿಯೂರಪ್ಪ ಅನಿವಾಸಿ ಕನ್ನಡಿಗರಿಗೆ ಮನವಿ ಮಾಡಿದರು.
![CM BSY asks American Kannadigas to help develop schools and colleges](https://etvbharatimages.akamaized.net/etvbharat/prod-images/kn-bng-03-akkasammelana-cmvirtual-poto-7201951_05092020215810_0509f_1599323290_903.jpg)
ಗೃಹ ಕಚೇರಿ ಕೃಷ್ಣಾದಲ್ಲಿ ಅಮೆರಿಕದಿಂದ ನಡೆಯುತ್ತಿರುವ ವರ್ಚುವಲ್ ಅಕ್ಕ ವಿಶ್ವ ಸಮ್ಮೇಳನ - 2020ನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕನ್ನಡ ಮತ್ತು ಕನ್ನಡಿಗರಿಗಾಗಿ ನಮ್ಮ ಸಹಕಾರ ಎಂದಿಗೂ ಇರುತ್ತದೆ. ಕನ್ನಡದ ಪ್ರಗತಿಗಾಗಿ ನಾವು ಕಂಕಣ ತೊಟ್ಟಿದ್ದೇವೆ. ಕನ್ನಡಿಗರಲ್ಲಿ ವಿಶ್ವಮಾನವ ಆಗುವ ಅಂತಃ ಶಕ್ತಿ ಇದೆ ಅನ್ನೋದನ್ನು ನಿರೂಪಿಸುವ ಸಂಕಲ್ಪ ನಿಮ್ಮದಾಗಲಿ. ಅಕ್ಕ ವಿಶ್ವ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕನ್ನಡದ ಕಂಪನ್ನು ಕಡಲಾಚೆ ಹರಡಲು ಸಜ್ಜಾಗಿರುವುದು ಸಂತೋಷದ ಸಂಗತಿ. ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಅಕ್ಕ ವಿಶ್ವ ಸಮ್ಮೇಳನ ವಿದೇಶದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸುತ್ತಿದೆ. ನೀವು ಅಲ್ಲಿ ನೆಲೆಸಿದ್ದರೂ ಕನ್ನಡತನವನ್ನು ಮೆರೆಯುತ್ತಿದ್ದೀರಿ. ಕೋವಿಡ್ ಸಂದರ್ಭದಲ್ಲೂ ಕನ್ನಡ ಪರವಾದ ಮನಸ್ಸು, ಕನ್ನಡವನ್ನು ಒಗ್ಗೂಡಿಸುವ ಸಂಕಲ್ಪವೇ ಇಂದು ಈ ಸಮ್ಮೇಳನ ಆಯೋಜಿಸಲು ಸಾಧ್ಯವಾಗಿಸಿದೆ ಎಂದರು.
ಕನ್ನಡ ಮತ್ತು ಕರ್ನಾಟಕಕ್ಕೆ ವಿಶ್ವಮಟ್ಟದಲ್ಲಿ ಮಾನ್ಯತೆ ಇದೆ. ಕನ್ನಡ ಸಂಘಟನೆಗಳ ಮೂಲಕ ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಬೆಳೆಸುತ್ತಿರುವುದು ಕನ್ನಡಾಭಿಮಾನಕ್ಕೆ ಹಿಡಿದ ಸಾಕ್ಷಿಯಾಗಿದೆ. ಕೊರೊನಾ ಸಂದರ್ಭ ವೈದ್ಯಕೀಯ ಕಿಟ್, ಪಡಿತರ ಕಿಟ್, ಪ್ರವಾಹ ಪೀಡಿತರಿಗೆ ಆರ್ಥಿಕ ನೆರವು ನೀಡಿದ್ದೀರಾ. ಅದಕ್ಕೆ ನಾನು ರಾಜ್ಯದ ಪರ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
![CM BSY asks American Kannadigas to help develop schools and colleges](https://etvbharatimages.akamaized.net/etvbharat/prod-images/kn-bng-03-akkasammelana-cmvirtual-poto-7201951_05092020215810_0509f_1599323290_200.jpg)
ನಿಮ್ಮ ಹುಟ್ಟೂರು ಮತ್ತು ನೀವು ಕಲಿತ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಲು ವಿನಂತಿಸುತ್ತೇನೆ. ಅದರ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ. ಕನ್ನಡಿಗರು ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವಾದ್ಯಂತ ಹಾರಿಸಿದ್ದೀರಿ ಎಂದು ತಿಳಿಸಿದರು.