ಬೆಂಗಳೂರು : ಸ್ಟಾರ್ಟ್ ಅಪ್ ಆವಿಷ್ಕಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಫಾರ್ಚೂನ್ 500 ಕಂಪನಿಗಳ ಪೈಕಿ 400 ಕಂಪನಿಗಳಿಗೆ ಬೆಂಗಳೂರು ನೆಲೆಯಾಗಿವೆ. ವಿಶ್ವದ ಯಾವುದೇ ದೇಶವು ಇಷ್ಟು ಕಂಪನಿಗಳನ್ನು ಹೊಂದಿಲ್ಲ. ಸ್ಟಾರ್ಟಪ್ ಕರ್ನಾಟಕಕ್ಕೆ ಹೊಸದಲ್ಲ ಮತ್ತು ಕರ್ನಾಟಕವು ಸ್ಟಾರ್ಟ್ಅಪ್ಗಳಿಗೆ ಅಗ್ರ ತಾಣವಾಗಿದೆ ಎಂದು ಸಿ.ಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸ್ವಿಡ್ಜಲೆರ್ಂಡ್ ಮೂಲದ ಪ್ರಮುಖ ಸಲಹಾ ಸಂಸ್ಥೆಯಾದ ಸ್ಮಡ್ಜಾ & ಸ್ಮಡ್ಜಾ ಆಯೋಜಿಸಿದ ಭಾರತದ ಮೊಟ್ಟಮೊದಲ ಜಾಗತಿಕ ಸ್ಟಾರ್ಟ್ ಅಪ್ ಸಮ್ಮೇಳನವಾದ "ಇಂಡಿಯಾ ಗ್ಲೋಬಲ್ ಇನ್ನೊವೇಶನ್ ಕನೆಕ್ಟ್" ಅನ್ನು ಉದ್ಘಾಟಿಸಿದರು. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ), ಕ್ಯಾಟಮರನ್ ವೆಂಚರ್ಸ್ ಮತ್ತು ಟಾಟಾ ಡಿಜಿಟಲ್ನೊಂದಿಗಿನ ಸಹಭಾಗಿತ್ವದಲ್ಲಿ ಈ ಸಮ್ಮೇಳನವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸ್ಟಾರ್ಟ್ಅಪ್ಗಳನ್ನು ಬೆಂಬಲಿಸುವಲ್ಲಿ ಕರ್ನಾಟಕ ಸರ್ಕಾರವು ಎಷ್ಟು ದೂರ ಬೇಕಾದರೂ ಹೋಗಲು ಸಿದ್ಧವಿದೆ. ನಾವು ಸ್ಪರ್ಧೆಯ ಬಗ್ಗೆ ಚಿಂತಿಸುವುದಿಲ್ಲ. ಇದು ನಮ್ಮನ್ನು ಮುಂದುವರಿಸುತ್ತದೆ ಮತ್ತು ಬೆಳೆಸುತ್ತದೆ. ನಾವು ಸ್ಪರ್ಧೆಯನ್ನು ವೇಗವರ್ಧಕವಾಗಿ ಪರಿವರ್ತಿಸುತ್ತೇವೆ ಎಂದು ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ),ಐ.ಜಿ.ಐ.ಸಿ.ಯ ಸ್ಟ್ರಾಟಜಿಕ್ ಪಾಲುದಾರ ಸಂಸ್ಥೆಯಾಗಿ ತೊಡಗಿಸಿಕೊಂಡಿದೆ. ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಕ್ರಿಯಾತ್ಮಕ ಕೇಂದ್ರವಾಗಿ ಕರ್ನಾಟಕದ ಅಸ್ಥಿತ್ವವನ್ನು ಹೆಚ್ಚಿಸಲು ಕೊಡುಗೆ ನೀಡುವ ಮೂಲಕ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಈ ಕಾರ್ಯಕ್ರಮದಲ್ಲಿ ಅವಿಭಾಜ್ಯ ಪಾತ್ರ ವಹಿಸಿದೆ ಎಂದು ಹೇಳಿದರು.
ಕರ್ನಾಟಕವನ್ನು ಆವಿಷ್ಕಾರ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ಕೇಂದ್ರವಾಗಿ ಪರಿವರ್ತಿಸಲು ಶ್ರಮ : ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನ ಅಧ್ಯಕ್ಷ ಬಿ.ವಿ.ನಾಯ್ಡು , ಕೆಡಿಇಎಂ ಪ್ರಾರಂಭದಿಂದಲೂ ಕರ್ನಾಟಕವನ್ನು ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಸ್ಥಾಪಿಸಲು ಅವಿರತವಾಗಿ ಶ್ರಮಿಸುತ್ತಿದೆ. ದೇಶದ ಅಭಿವೃದ್ಧಿ ಮತ್ತು ಡಿಜಿಟಲ್ ಆರ್ಥಿಕತೆಗೆ ಕೊಡುಗೆ ನೀಡಬಲ್ಲ ನವ ಉದ್ಯಮಗಳಿಗೆ ಉತ್ತಮ ವೇದಿಕೆಯನ್ನು ರಚಿಸಲು ನೀತಿ ನಿರೂಪಕರು ಮತ್ತು ಉದ್ಯಮದ ನಡುವೆ ಸೇತುವೆ ನಿರ್ಮಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ದೇಶದಲ್ಲೇ ಸ್ಟಾರ್ಟ್ ಅಪ್ ನೀತಿಯನ್ನು ಪರಿಚಯಿಸಿದ ಮೊದಲ ರಾಜ್ಯ ಕರ್ನಾಟಕ. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಕೈಗಾರಿಕೀಕರಣ, ಬ್ಯಾಂಕಿಂಗ್ ಮತ್ತು ಅನುಶೋಧನೆ ಬೆಂಬಲಿಸಿದ ಮೈಸೂರು ಮಹಾರಾಜರು ಸ್ಟಾರ್ಟ್ ಅಪ್ ಕ್ರಾಂತಿಯ ಬೀಜಗಳನ್ನು ಬಿತ್ತಿದರು ಎಂದು ಬಣ್ಣಿಸಿದರು.
ಭಾರತ ಉದ್ಯಮಶೀಲ ಭರವಸೆಯ ದೇಶ : ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಸ್ಮಡ್ಜಾ & ಸ್ಮಡ್ಜಾ ಅಧ್ಯಕ್ಷ ಕ್ಲೌಡ್ ಸ್ಮಡ್ಜಾ, "ಭಾರತವು ಯಾವಾಗಲೂ ನನಗೆ ಉತ್ತಮ ಉದ್ಯಮಶೀಲ ಭರವಸೆಯ ದೇಶವಾಗಿದೆ. 4 ನೇ ಕೈಗಾರಿಕಾ ವಿಕಾಸವು ಪ್ರಾರಂಭವಾದಂತೆ, ಭಾರತವು ವಿಶೇಷವಾಗಿ ತನಗೆ ಮತ್ತು ಜಗತ್ತಿಗೆ ಪರಿಹಾರಗಳನ್ನು ಆವಿಷ್ಕರಿಸುವ ಸಾಮರ್ಥ್ಯದೊಂದಿಗೆ ವೇಗವರ್ಧಕದ ಪಾತ್ರವನ್ನು ವಹಿಸುತ್ತದೆ ಎಂದು ಒಪ್ಪಿಕೊಳ್ಳುವುದು ಸೂಕ್ತವಾಗಿದೆ.
ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್- ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇದರ ಪರಿಣಾಮವಾಗಿ, ಇಂಡಿಯಾ ಗ್ಲೋಬಲ್ ಇನ್ನೋವೇಶನ್ ಕನೆಕ್ಟ್ ಭಾರತದ ಸ್ಟಾರ್ಟ್- ಅಪ್ ಮತ್ತು ಅನುಶೋಧನೆ ಕಥೆಯು ಹೇಗೆ ಜಾಗತಿಕವಾಗುತ್ತಿದೆ ಎಂಬುದರ ಸಾಮರ್ಥ್ಯವನ್ನು ಇದು ಎತ್ತಿ ತೋರಿಸುತ್ತದೆ. ಪ್ರಪಂಚದ ಹೊಸ ಸಿಲಿಕಾನ್ ವ್ಯಾಲಿಯಾಗಿ ಹೊರಹೊಮ್ಮುವುದು ಉತ್ತಮ, ಸುರಕ್ಷಿತ ಮತ್ತು ಬಲವಾದ ನಾಳೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಸಿಂಗಾಪುರ, ಇಸ್ರೇಲ್, ಸ್ವಿಡ್ಜರ್ಲ್ಯಾಂಡ್, ಅಮೆರಿಕ, ಜಪಾನ್, ಕೊರಿಯಾ ಮತ್ತು ಜರ್ಮನಿಯ ಅಂತಾರಾಷ್ಟ್ರೀಯ ಹೂಡಿಕೆದಾರರು, ಖಾಸಗಿ ಈಕ್ವಿಟಿ ಸಂಸ್ಥೆಗಳು, ಉದ್ಯಮಿಗಳು ಮತ್ತು ಅನುಶೋಧಕರು ಭಾಗವಹಿಸಿದ್ದರು. ಸಮಾರಂಭದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಶ್ರೀ ಬಿ ವಿ ನಾಯ್ಡು, ಕ್ಯಾಟಮಾರನ್ ವೆಂಚರ್ಸ್ ಅಧ್ಯಕ್ಷ ಶ್ರೀ ರಂಗನಾಥ್ ಎಮ್ ಡಿ, ಆಕ್ಸೆಲ್ ಪಾಟ್ರ್ನರ್ಸ್, ಇಂಡಿಯಾದ ಪ್ರಶಾಂತ್ ಪ್ರಕಾಶ್ ಮತ್ತು ಬಿಗ್ ಬಾಸ್ಕೆಟ್, ಇಂಡಿಯಾದ ಸಹ- ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮೆನನ್ ಮುಂತಾದವರು ಉಪಸ್ಥಿತರಿದ್ದರು.
ಜಾಗತಿಕ ಸ್ಟಾರ್ಟ್ ಅಪ್ ಸಮ್ಮೇಳನ: ರಾಜಧಾನಿಯ ಹೋಟೆಲ್ ಕಾನ್ರಾಡ್ನಲ್ಲಿ ನಡೆಯುತ್ತಿರುವ 2 ದಿನಗಳ ಈ ಸಮ್ಮೇಳನದಲ್ಲಿ ಭಾರತ ಮತ್ತು ಸಿಂಗಾಪುರ, ಇಸ್ರೇಲ್, ಸ್ವಿಡ್ಜರ್ಲ್ಯಾಂಡ್, ಅಮೆರಿಕ, ಜಪಾನ್, ಕೊರಿಯಾ ಮತ್ತು ಜರ್ಮನಿಯಂತಹ ದೇಶಗಳಿಂದ ಆಗಮಿಸಿದ 100 ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸುತ್ತಿದ್ದಾರೆ. 22 ಅಧಿವೇಶನಗಳಲ್ಲಿ ಪ್ಯಾನೆಲಿಸ್ಟ್ ಗಳು ತಾಂತ್ರಿಕ ಪಾಲುದಾರಿಕೆಗಳು, ಗ್ರೀನ್ಟೆಕ್, ಫಿನ್ಟೆಕ್, ಡೀಪ್ಟೆಕ್, ಎಡ್ಟೆಕ್, ವೆಬ್ 3.0, ಸೂಪರ್ ಆ್ಯಪ್ಗಳು ಮತ್ತು ಯುನಿಕಾರ್ನ್ ಗ್ರೋತ್ ಕಥೆಗಳು ಮತ್ತು ಪಾಲುದಾರಿಕೆಗಳ ಕುರಿತು ವಿಚಾರಗಳನ್ನು ಕೇಂದ್ರೀಕರಿಸಲಾಗುತ್ತಿದೆ.
ಓದಿ : ವಾಹನದ ನಂಬರ್ ಪ್ಲೇಟ್ ಮೇಲೆ ಚಿಹ್ನೆ, ಡೆಸಿಗ್ನೇಷನ್ ಕಂಡ್ರೆ ಫೋಟೋ ಕ್ಲಿಕ್ಕಿಸಿ ದೂರು ನೀಡಿ..