ಬೆಂಗಳೂರು : ಚೈತ್ರ ಪೂರ್ಣಿಮೆಯ ಬೆಳದಿಂಗಳಲ್ಲಿ ಧರ್ಮರಾಯ ದೇವಸ್ಥಾನದಿಂದ ಹೊರಟ ಹೂವಿನ ಕರಗ ತಡ ರಾತ್ರಿ 12.30 ಕ್ಕೆ ಚಾಲನೆ ದೊರೆಯಿತು.
ಕೋವಿಡ್ ಹಿನ್ನೆಲೆ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ವಿಧಿಸಿರುವುದರಿಂದ ಸಂಪ್ರದಾಯ ಬದ್ಧವಾಗಿ ಸರಳವಾಗಿ ಹೂವಿನ ಕರಗ ನಡೆಯಿತು.
ಸರಳವಾಗಿ ಕರಗ ಮಹೋತ್ಸವ ನಡೆದಿದ್ದರ ಬಗ್ಗೆ ವಹ್ನಿಕುಲ ಮುಖಂಡ ಪಿ. ಆರ್. ರಮೇಶ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಅರ್ಚಕ ಜ್ಞಾನೇಂದ್ರ ಕರಗ ಉತ್ಸವ ನಡೆಸಿ ಕೊಟ್ಟರು.
ಉತ್ಸವದ ಪ್ರಯುಕ್ತ ನಿನ್ನೆ ಮುಂಜಾನೆಯಿಂದ ಧರ್ಮರಾಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು.

ನಿನ್ನೆ ಬೆಳಗ್ಗೆ 10.30ಕ್ಕೆ ಕರಗ ಹೊರುವ ಪೂಜಾರಿ ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು ಕಬ್ಬನ್ ಪಾರ್ಕ್ ಕರಗದ ಕುಂಟೆಯಲ್ಲಿರುವ ದ್ರೌಪದಿ ದೇವಿಗೆ ಗಂಗೆ ಪೂಜೆ ಸಲ್ಲಿಸಿದ್ದರು. ರಾತ್ರಿ ಹೂವಿನ ಕರಗ ನಡೆಯಿತು.

ಕರಗ ಉತ್ಸವ ಎಂದರೆ ಶಕ್ತಿ ದೇವತೆಯಾದ ದ್ರೌಪದಿ ಕರಗ. ಕುಂಭದಲ್ಲಿ ದುರ್ಗೆಯನ್ನು ಆವಾಹಿಸಿ, ಪೂಜಿಸಿ, ಹೂವಿನಿಂದ ಅಲಂಕಾರಗೊಂಡ ಕರಗಕ್ಕೆ ಪೂಜೆ ಸಲ್ಲಿಸಲಾಯಿತು.
ನಂತರ ಧರ್ಮರಾಯ ದೇವಸ್ಥಾನದ ಅರ್ಚಕರಾದ ಗಣಾಚಾರಿ ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ದೇವಸ್ಥಾನದಲ್ಲಿ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಕತ್ತಿ ಹಿಡಿದು ವೀರಕುಮಾರರ ನಡುವೆ ಕರಗ ಹೊತ್ತು ಸಾಗಿದರು.
ಮಧ್ಯರಾತ್ರಿ 12ಕ್ಕೆ ದೇವಾಲಯದಿಂದ ಸಾಗುವ ಹೂವಿನ ಕರಗಕ್ಕೆ ದೇವಸ್ಥಾನದ ಅವರಣದಲ್ಲಿಯೇ ಮೆರವಣಿಗೆ ಮಾಡಲಾಯಿತು.