ಬೆಂಗಳೂರು: ನಾಗಾವಾರ-ಗೊಟ್ಟಿಗೇರಿ ಮಾರ್ಗದ ನಮ್ಮ ಮೆಟ್ರೋ ಯೋಜನೆಗೆ 872 ಮರಗಳನ್ನು ಕಡಿಯುವ ಪ್ರಸ್ತಾಪದ ಕುರಿತು ಸ್ಪಷ್ಟ ವರದಿ ಸಲ್ಲಿಸುವಂತೆ ಹೈಕೋರ್ಟ್, ಬಿಎಂಆರ್ಸಿಎಲ್ಗೆ ನಿರ್ದೇಶಿಸಿದೆ.
ಅಭಿವೃದ್ಧಿ ಯೋಜನೆಗಳಿಗೆ ಮರಗಳನ್ನು ತೆರವು ಮಾಡುವುದನ್ನು ಪ್ರಶ್ನಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ, ಬಿಎಂಆರ್ಸಿಎಲ್ ಸಲ್ಲಿಸಿರುವ ಪ್ರಮಾಣಪತ್ರಗಳು ಮತ್ತು ವರದಿಗಳನ್ನು ಪರಿಶೀಲಿಸಿದ ಪೀಠ, ಇವುಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಮರಗಳನ್ನು ತೆರವು ಮಾಡುವ ಕುರಿತು ಏ. 16ರೊಳಗೆ ವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ಸೂಚನೆ ನೀಡಿತು.
ನಿಗಮ 2021ರ ಜನವರಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿರುವಂತೆ ಮಾರ್ಗದಲ್ಲಿ 1740 ಮರಗಳನ್ನು ತೆರವುಗೊಳಿಸಲು ಅರ್ಜಿ ಸಲ್ಲಿಸಲಾಗಿದೆ. ಆದರೆ ಅವುಗಳಲ್ಲಿ 872 ಮರಗಳಿಗೆ ಕಾಯ್ದೆಯಲ್ಲಿಯೇ ವಿನಾಯಿತಿ ಇದೆ. ಅನುಮತಿ ಬೇಕಿಲ್ಲ ಎಂದು ಹೇಳಲಾಗಿತ್ತು. ಆದರೆ ಆ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ತಜ್ಞರ ಸಮಿತಿಗೆ ಸೂಚಿಸಲಾಗಿತ್ತು. ಸಮಿತಿ ವರದಿ ನೀಡಿದ್ದರೂ ಸಹ ಎಷ್ಟು ಮರಗಳಿಗೆ ವಿನಾಯಿತಿ ಇದೆ, ಎಷ್ಟು ಮರ ಸ್ಥಳಾಂತರ ಮಾಡಬೇಕು, ಎಷ್ಟು ಮರ ಕತ್ತರಿಸಬೇಕು ಎಂಬ ಬಗ್ಗೆ ಗೊಂದಲಗಳಿವೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಅಲ್ಲದೆ, ಮರಗಳನ್ನು ತೆರವುಗೊಳಿಸಲು ನಿಯಮದಲ್ಲಿ ವಿನಾಯಿತಿಯಿದ್ದರೂ ಸಹ ನಿಗಮ ಒಮ್ಮೆ ತಜ್ಞರ ಸಮಿತಿಯ ಮುಂದೆ ಮನವಿ ಸಲ್ಲಿಸಿ, ಪರಿಶೀಲನೆ ನಡೆಸುವಂತೆ ಕೋರುವುದು ಸೂಕ್ತ ಎಂದು ಬಿಎಂಆರ್ಸಿಎಲ್ಗೆ ಸಲಹೆ ಮಾಡಿತು.