ಬೆಂಗಳೂರು: ಪೊಲೀಸ್ ಶ್ವಾನ ದಳದ ಸಾಧನೆ ಕಂಡು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅಭಿನಂದಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ತಲಾ 500ರಂತೆ 50 ಸಾವಿರ ನಗದು ಮತ್ತು ಪ್ರಶಂಸನಾ ಪತ್ರ ನೀಡಿದ್ದಾರೆ.
ಅಪರಾಧ ಪ್ರಕರಣಗಳನ್ನು ಬೇಧಿಸಿ ಸಾರ್ವಜನಿಕರ ಜೊತೆಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ಪೊಲೀಸರ ಪಾತ್ರ ಬಹಳ ಪ್ರಮುಖವಾದದ್ದು. ಅದರಂತೆಯೇ ರಾಜ್ಯ ಪೊಲೀಸ್ ಶ್ವಾನ ದಳ ಬೆಂಗಳೂರಿನ ಸಿಎಆರ್ ಆಡುಗೋಡಿಯಲ್ಲಿ ಇದ್ದು, ರಾಜ್ಯದ ಪ್ರತೀ ಜಿಲ್ಲೆಯ ಡಿಎಆರ್ ಅಥವಾ ಸಿಎಆರ್ ಪೊಲೀಸ್ ಸಿಬ್ಬಂದಿ ಇಲ್ಲಿಯೇ ಬಂದು ಒಂಭತ್ತು ತಿಂಗಳ ಕಾಲ ಶ್ವಾನಗಳ ತರಬೇತಿ ಪಡೆದುಕೊಂಡು ಹೋಗುತ್ತಾರೆ.
ಇಲ್ಲಿ ಸ್ಫೋಟಕ ವಸ್ತುಗಳ ಕುರಿತು ಹಾಗೂ ಕೊಲೆ, ಸುಲಿಗೆ, ದರೋಡೆ, ಕಳ್ಳತನ ಮತ್ತು ಗಾಂಜಾ, ಅಫೀಮುಳಂತಹ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶಿಷ್ಟ ಮತ್ತು ವಿನೂತನವಾದ ತರಬೇತಿ ಕೊಡಲಾಗುತ್ತದೆ. ಇಲ್ಲಿ ಲ್ಯಾಬ್ರಿಡರ್, ಜರ್ಮನ್ ಶೆಪರ್ಡ್, ಡಾಬರ್ ಮನ್ ತಳಿಯ ಒಟ್ಟು 58 ಶ್ವಾನಗಳು ಇದ್ದು, ದೇಶ-ವಿದೇಶಗಳಿಂದ ಬರುವ ಗಣ್ಯ, ಅತಿ ಗಣ್ಯ ವ್ಯಕ್ತಿಗಳಿಗೆ ವಿಶೇಷ ಭದ್ರತೆ ಮತ್ತು ಸಿಎಂ ನಿವಾಸ, ರಾಜಭವನ, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ರೈಲ್ವೆ ನಿಲ್ದಾಣಗಳು, ಮೆಟ್ರೋ, ಬಸ್ ನಿಲ್ದಾಣಗಳು ಹಾಗೂ ರಾಜಧಾನಿಯ ಸೂಕ್ಷ್ಮ ಸ್ಥಳಗಳು, ಪ್ರವಾಸಿ ತಾಣಗಳು, ಮತ್ತು ರಾಜ್ಯಪಾಲರು, ಮುಖ್ಯಮಂತ್ರಿಗಳು ಭಾಗವಹಿಸುವ ಸ್ಥಳೀಯ ಕಾರ್ಯಕ್ರಮಗಳಲ್ಲಿ ವಿಶೇಷ ತಪಾಸಣಾ ಕಾರ್ಯವನ್ನು ರಾಜ್ಯ ಪೊಲೀಸ್ ಶ್ವಾನ ದಳ ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಭಾಸ್ಕರ್ ರಾವ್ ನೀಡಿದ ನಗದು ಬಹುಮಾನವನ್ನು ಶ್ವಾನ ದಳದ ಸಿಎಆರ್ ದಕ್ಷಿಣ ವಿಭಾಗದ ಡಿಸಿಪಿ ಯೋಗೇಶ, ಶ್ವಾನ ದಳದ ಎಸಿಪಿ ನಿಂಗಾರೆಡ್ಡಿ ಪಾಟೀಲ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಪಡೆದಿದ್ದಾರೆ.