ಬೆಂಗಳೂರು: ಬಮುಲ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಯ ನೆರವಿಗೆ ಧಾವಿಸಿರುವ ಬಮುಲ್ ಸಂಸ್ಥೆಯು, ಕೋವಿಡ್ ಸಂಕಷ್ಟದ ಕಾಲದಲ್ಲಿ ನೆರವನ್ನು ನೀಡಿದೆ. ಸುಮಾರು 8 ಕೋಟಿ ರೂ. ಅಧಿಕ ಮೊತ್ತವನ್ನು ಇದಕ್ಕಾಗಿ ವಿನಿಯೋಗಿಸಿದ್ದು, ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಯಶವಂತಪುರ ಕ್ಷೇತ್ರದ ಶಾಸಕ ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಸೋಮಶೇಖರ್, ಬಮುಲ್ ವತಿಯಿಂದ ಉತ್ತಮ ಕಾರ್ಯವನ್ನು ಮಾಡಲಾಗುತ್ತಿದೆ. ಇಂಥ ಕೊರೊನಾ ಸಂಕಷ್ಟ ಕಾಲದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ನೆರವಿನ ಅಗತ್ಯವಿದೆ ಎಂದು ಮನಗಂಡಿರುವುದು ಉತ್ತಮ ನಡೆಯಾಗಿದೆ. ಒಟ್ಟಾರೆಯಾಗಿ ಬಮುಲ್ ವ್ಯಾಪ್ತಿಯ ಕಚೇರಿಗಳ ಸಿಬ್ಬಂದಿಗೆ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಕಿ, 4.50 ಕೋಟಿ ರೂಪಾಯಿ ವೆಚ್ಚದಲ್ಲಿ ತುಪ್ಪ, ಹಾಲು ವಿತರಕರಿಗೆ 3.6 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಹಾಲು ಹಾಗೂ ಉಚಿತ ಮೆಡಿಕ್ಲೈಮ್ (ವೈದ್ಯಕೀಯ ವಿಮೆ) ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಬಮುಲ್ ವ್ಯಾಪ್ತಿಯಲ್ಲಿನ ಎಲ್ಲ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ಈ ಸೌಲಭ್ಯ ದೊರೆಯಲಿದೆ. ಇದರಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ಇವರ ನೆರವಿಗೆ ದಾವಿಸಲಾಗಿದ್ದು, ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶ ಇದಾಗಿದೆ. ಇದೇ ಮಾದರಿಯಲ್ಲಿ ಉಳಿದ ಹಾಲು ಉತ್ಪಾದಕ ಸಂಘಗಳೂ ತಮ್ಮ ಸೇವೆಯನ್ನು ಮಾಡಲಿ ಎಂದು ಸಚಿವರು ತಿಳಿಸಿದರು.
ಮೊದಲನೇ ಅಲೆ ಇಷ್ಟು ತೊಂದರೆ ಕೊಟ್ಟಿರಲಿಲ್ಲ. ಆದರೆ, ಎರಡನೇ ಅಲೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಯಾರಿಗೂ ಎರಡನೇ ಅಲೆಯ ತೀವ್ರತೆ ಗೊತ್ತಿರಲಿಲ್ಲ. ನನ್ನ ಜೊತೆಗೆ 20 ವರ್ಷಗಳಿಂದ ಇದ್ದವರು ಸಹ ಕೊರೊನಾ ತೀವ್ರತೆ ಬಲಿಯಾಗಿದ್ದಾರೆ. ಜ್ವರ, ನೆಗಡಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ಚಿಕಿತ್ಸೆ ಪಡೆಯಿರಿ, ಮನೆಯಲ್ಲೇ ಸ್ವ ಔಷಧಿ ಮಾಡಿಕೊಂಡವರಿಗೆ ಸಮಸ್ಯೆಯಾಗಿ ಮೃತಪಟ್ಟವರ ಪ್ರಮಾಣ ಹೆಚ್ಚಿದೆ. ಹಾಗಾಗಿ ಎಲ್ಲರೂ ಚಿಕಿತ್ಸೆ ಪಡೆಯಿರಿ. ನನ್ನ ಯಶವಂತಪುರ ಕ್ಷೇತ್ರದಲ್ಲಿ ಏಳೂವರೆ ಸಾವಿರ ಜನರಿಗೆ ಕೋವಿಡ್ ಸೋಂಕು ಬಂದಿದ್ದು, ಈಗಾಗಲೇ ಆರೂವರೆ ಸಾವಿರ ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವರ ಸೋಮಶೇಖರ್ ತಿಳಿಸಿದರು.
ಎಲ್ಲ ಗ್ರಾಮ, ವಾರ್ಡ್ಗಳಲ್ಲೂ ವ್ಯಾಕ್ಸಿನೇಶನ್ಗೆ ಅನುಕೂಲವನ್ನು ಮಾಡಿಕೊಡಲಾಗುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಸಹ ನಿಂತುಕೊಂಡು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬೇಕು. ಇನ್ನು ತೊಂದರೆಯಲ್ಲಿರುವವರಿಗೆ ಪಡಿತರ ಕಿಟ್ ಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಯಾರಿಗೆ ತೊಂದರೆಯಾಗಿದೆಯೋ ಅವರ ಸಹಾಯಕ್ಕೆ ಧಾವಿಸುವ ಕೆಲಸಕ್ಕೆ ಆಗುತ್ತಿದೆ. ಇಸ್ಕಾನ್ ದೇವಸ್ಥಾನದಿಂದ ಅನುಕೂಲ ಬೇಕಿದ್ದ ಕಡೆ ಸುಮಾರು 2 ಸಾವಿರ ಮಂದಿಗೆ ಭೋಜನ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದರು.
ಇದನ್ನು ಓದಿ:ಇಂದು ರಾಜ್ಯಪಾಲರನ್ನು ಭೇಟಿಯಾಗಿ ಲಸಿಕೆ ಖರೀದಿಸುವುದಕ್ಕೆ ಅನುಮತಿ ಕೋರಲಿರುವ ಡಿಕೆಶಿ