ಬೆಂಗಳೂರು: ಆಸ್ತಿ ತೆರಿಗೆ ಜೊತೆಯಲ್ಲೇ, ಈಗಾಗಲೇ ಘನ ತ್ಯಾಜ್ಯ, ಭಿಕ್ಷುಕರ ಸೆಸ್, ಗ್ರಂಥಾಲಯ ಸೆಸ್ಗಳು ಇವೆ. ಇವುಗಳ ಸಾಲಿಗೆ ಭೂ ಸಾರಿಗೆ ಸೆಸ್ ಅನ್ನು ಸೇರಿಸಲು ಪಾಲಿಕೆ ಇಂದಿನ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.
ಈ ಹಿಂದೆಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ ಭೂ ಸಾರಿಗೆ ಸೆಸ್ ಅನ್ನು ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತರದಂತೆ ಬಿಜೆಪಿಯೇ ವಿರೋಧಿಸಿತ್ತು. ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ರಸ್ತೆಗಳು ಬೇಗ ಹಾಳಾಗುತ್ತಿವೆ. ಹೀಗಾಗಿ ರಸ್ತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಬಿಎಂಪಿ ಈ ಸೆಸ್ ಅಳವಡಿಸಲು ಮುಂದಾಗಿದೆ. ಬೆಂಗಳೂರಿನ ನಾಗರಿಕರಿಂದ ವಾರ್ಷಿಕ 150 ಕೋಟಿ ರೂ. ಆದಾಯದ ನಿರೀಕ್ಷೆ ಇದೆ. ಹೆಚ್ಚುವರಿ ಕರವನ್ನು ಸರ್ಕಾರಕ್ಕೆ ಅಥವಾ ಸಾರಿಗೆ ಇಲಾಖೆಗೆ ನೀಡದೆ ಮತ್ತೆ ರಸ್ತೆ ಅಭಿವೃದ್ಧಿಗೆ ಬಳಸಲು ಬಿಬಿಎಂಪಿ ನಿರ್ಧರಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.
ವಿರೋಧ ಪಕ್ಷದ ಖಂಡನೆ:
ಅಂದು ಈ ನಿರ್ಣಯವನ್ನು ವಿರೋಧಿಸಿದ್ದ ಪದ್ಮಾನಾಭ ರೆಡ್ಡಿಯವರೇ ಈಗ ಅನುಮೋದನೆ ನೀಡಿದ್ದಾರೆ. 2013-14 ರಲ್ಲಿ ಅವರದ್ದೇ ಸರ್ಕಾರ ಇದ್ದಾಗ, ಬಿಜೆಪಿಯವರು ಬೇಡ ಅಂದಿದ್ರು. ಕಾಂಗ್ರೆಸ್ ಅವಧಿಯಲ್ಲೂ ನಿರ್ಣಯ ತೆಗೆದುಕೊಂಡಿರಲಿಲ್ಲ. ಜನರಿಗೆ ಹೊರೆ ಆಗೋದು ಖಚಿತ. ಜನರಿಗೆ ಟೋಪಿ ಹಾಕಿ ದರ್ಬಾರ್ ಮಾಡಲು ಬಿಬಿಎಂಪಿ ಆಡಳಿತ ಮುಂದಾಗಿದೆ. ಜನರಿಗೆ ಹೊರೆ ಹಾಕಲು ಕಾಂಗ್ರೆಸ್ ಬಿಡುವುದಿಲ್ಲ. ಭೂಸಾರಿಗೆ ಸೆಸ್ ವಿರೋಧಿಸಿ ಕಾಂಗ್ರೆಸ್ ನಾಳೆ ಪ್ರತಿಭಟನೆ ನಡೆಸಲಿದೆ. ಕೌನ್ಸಿಲ್ ಸಭೆ ಆರಂಭಕ್ಕೂ ಮೊದಲೇ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ವಿಪಕ್ಷ ನಾಯಕ ವಾಜಿದ್ ತಿಳಿಸಿದರು.