ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯ ವಿದ್ಯಾಪೀಠ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಹುಡುಗರ ಹಾಸ್ಟೆಲ್ ನಲ್ಲಿ ಕೋವಿಡ್ ಆರೈಕೆ ಕೇಂದ್ರ ಮತ್ತು ಟ್ರಯಾಜಿಂಗ್ ಸೆಂಟರ್ನ್ನು ಆಯುಕ್ತ ಗೌರವ್ ಗುಪ್ತಾ, ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟ್ರಯಾಜ್ ಸೆಂಟರ್ ಮತ್ತು 20 ಹಾಸಿಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಸೌಲಭ್ಯವಿರುವ ಸ್ಥಿರೀಕರಣ ಕೇಂದ್ರಕ್ಕೆ ಮುಖ್ಯ ಆಯುಕ್ತರು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ, ಟ್ರಯಾಜಿಂಗ್ ಸೆಂಟರ್ ನಲ್ಲಿ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ನಿಯೋಜಿಸಿರುವ ಬಗ್ಗೆ ವಿಚಾರಿಸಿ ಸದರಿ ಸಿಬ್ಬಂದಿಗೆ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಸರ್ಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇನ್ನೂ ಹೆಚ್ಚು ಸ್ಥಳಾವಕಾಶವಿದ್ದು, ಇನ್ನೂ 20 ಸಾಮಾನ್ಯ ಹಾಸಿಗೆಗಳ ವ್ಯವಸ್ಥೆ ಮಾಡುವಂತೆ ವಲಯ ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.
ವಿದ್ಯಾಪೀಠ ಆರೋಗ್ಯ ಕೇಂದ್ರದ ಕಾರ್ಯ ಪರಿಶೀಲನೆ
ವಿದ್ಯಾಪೀಠ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ದಿನಕ್ಕೆ ಎಷ್ಟು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಪ್ರಾಥಮಿಕ ಸೋಂಕಿತರ ಪತ್ತೆಕಾರ್ಯ, ಹೋಮ್ ಐಸೋಲೇಷನ್ನಲ್ಲಿರುವವರ ಮೇಲೆ ನಿಗಾವಹಿಸಲಾಗುತ್ತಿರುವ ಜೊತೆಗೆ ಸೀಲ್ ಹಾಕುವ ಹಾಗೂ ಮೆಡಿಕಲ್ ಕಿಟ್ ಒದಗಿಸುವ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರಿಗೆ ತಕ್ಷಣ ಮೆಡಿಕಲ್ ಕಿಟ್ ನೀಡಿ ಹೊರಗೆ ಬಾರದೇ ಸ್ವಯಂ ಹೋಮ್ ಐಸೋಲೇಷನ್ ಅಲ್ಲಿರುವಂತೆ ಸೂಚಿಸಬೇಕು ಎಂದು ತಿಳಿಸಿದರು.
ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆ ಸ್ಥಿರೀಕರಣ ಕೇಂದ್ರ ಹಾಗೂ ಟ್ರಯಾಜಿಂಗ್ ಸೆಂಟರ್ ತಪಾಸಣೆ
ಇದೇ ವೇಳೆ ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆ ಸ್ಥಿರೀಕರಣ ಕೇಂದ್ರ ಹಾಗೂ ಟ್ರಯಾಜಿಂಗ್ ಸೆಂಟರ್ಗೆ ಭೇಟಿ ನೀಡಿದರು. ಸ್ಥಿರೀಕರಣ ಕೇಂದ್ರದಲ್ಲಿ ಇದುವರೆಗೆ 47 ಮಂದಿಗೆ ಚಿಕಿತ್ಸೆ ನೀಡಲಾಗಿರುತ್ತದೆ. ಅದರಂತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಟ್ರಯಾಜಿಂಗ್ ವ್ಯವಸ್ಥೆಯನ್ನು ತೀವ್ರಗೊಳಿಸಲು ಆರೋಗ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಅಗಡಿ ನರ್ಸಿಂಗ್ ಹೋಮ್ಗೆ ದಿಢೀರ್ ಭೇಟಿ
ಅಗಡಿ ನರ್ಸಿಂಗ್ ಹೋಮ್ಗೆ ಮುಖ್ಯ ಆಯುಕ್ತರು ದಿಢೀರ್ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ವ್ಯವಸ್ಥೆ ಮತ್ತು ಆಕ್ಸಿಜನ್ ಪೂರೈಕೆಯ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ಹಿಂದೆ ಸದರಿ ಆಸ್ಪತ್ರೆಯಲ್ಲಿ ವಾರಕ್ಕೊಮ್ಮೆ ಆಕ್ಸಿಜನ್ ಪೂರೈಕೆ ಆಗುತ್ತಿದ್ದು, ಇದೀಗ ಬೇಡಿಕೆ ಹೆಚ್ಚಾಗಿ ದಿನಕ್ಕೊಮ್ಮೆ ಆಕ್ಸಿಜನ್ ಸರಬರಾಜು ಆಗುತ್ತಿದ್ದು, ಕೋವಿಡ್ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಓದಿ: ವ್ಯಾಕ್ಸಿನ್ ಗೊಂದಲ ನಿವಾರಿಸಿ, 2ನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಿ: ಬಿಎಸ್ವೈ ಸೂಚನೆ