ಬೆಂಗಳೂರು: ಕಸದ ಲಾರಿ ಹರಿದು ಮಹಿಳೆಯೋರ್ವರು ಸಾವಿಗೀಡಾಗಿರುವ ಘಟನೆ ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯ ನಾಯಂಡಹಳ್ಳಿ ಬಳಿ ನಡೆದಿದೆ. 39 ವರ್ಷದ ಪದ್ಮಿನಿ ಮೃತ ದುರ್ದೈವಿ. ಎಸ್ಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು, ಸೇಂಟ್ ಮಾರ್ಕ್ಸ್ ರಸ್ತೆಯಿಂದ ಆರ್.ಆರ್ ನಗರಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಕಸದ ಲಾರಿಗೆ ಇದು ಮೂರನೇ ಬಲಿಯಾಗಿದೆ. ಹೆಬ್ಬಾಳ ಹಾಗೂ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಕಸದ ಲಾರಿ ಹರಿದು ಓರ್ವ ಶಾಲಾ ಬಾಲಕಿ ಹಾಗೂ ವ್ಯಕ್ತಿಯೊಬ್ಬರು ಇದೇ ತಿಂಗಳಿನಲ್ಲಿ ಸಾವಿಗೀಡಾಗಿದ್ದರು. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದು, ಅಪಘಾತವಾಗುತ್ತಿದ್ದಂತೆ ಲಾರಿ ಚಾಲಕ ಎಸ್ಕೇಪ್ ಆಗಿದ್ದಾನೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ವಿಜಯಪುರ: ಸಿಡಿಲು ಬಡಿದು ಇಬ್ಬರು ಸಹೋದರರು ಸಾವು