ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ ಜೋಶಿ ಸ್ವಾಗತಿಸಿದರು.
ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ವಾಯುಪಡೆ ವಿಮಾನದಲ್ಲಿ ಆಗಮಿಸಿದ ಶಾ, ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನದ ಭೋಜನ ಸೇವಿಸಿದರು. ಬಳಿಕ ವಾಯುಪಡೆ ಹೆಲಿಕಾಪ್ಟರ್ನಲ್ಲಿ ಶಿವಮೊಗ್ಗದ ಭದ್ರಾವತಿಗೆ ಪ್ರಯಾಣ ಬೆಳೆಸಿದರು. ಅಮಿತ್ ಶಾ ಜೊತೆಯಲ್ಲಿ ಸಿಎಂ ಬಿಎಸ್ವೈ ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ ಜೋಶಿ ಸಹ ಪ್ರಯಾಣಿಸಿದರು.
ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಲಿರುವ ಅಮಿತ್ ಶಾ ನಂತರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ 5:30 ಕ್ಕೆ ಹೆಚ್ಎಎಲ್ಗೆ ಆಗಮಿಸಲಿರುವ ಅಮಿತ್ ಶಾ ಅವರನ್ನು ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ಕರೆ ತರಲಾಗುತ್ತದೆ. ಅಮಿತ್ ಶಾ ಸ್ವಾಗತಕ್ಕೆ ವಿಧಾನಸೌಧ ತಯಾರಾಗಿದ್ದು, ನಾಲ್ಕು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮೊದಲ ಕಾರ್ಯಕ್ರಮವಾಗಿ ಇ - ಆರ್ಎಸ್ಎಸ್ ವಾಹನಗಳಿಗೆ ಚಾಲನೆ ನೀಡಲಿರುವ ಶಾ ನಂತರ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ ಮಾಡಲಿದ್ದಾರೆ. ಬ್ಯಾಂಕ್ವೆಟ್ ಹಾಲ್ನಲ್ಲಿ ವರ್ಚುಯಲ್ ಮೂಲಕ ವಸತಿ ಗ್ರಹಗಳ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಪೊಲೀಸ್ ಗೃಹ ನಿರ್ಮಾಣ - 2025 ಉದ್ಘಾಟನೆ, ಇಂಡಿಯಾ ರಿಸರ್ವ್ ಬೆಟಾಲಿಯನ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಇದನ್ನೂ ಓದಿ: ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿಲ್ಲ: ಕರುಣಾಕರ ರೆಡ್ಡಿ ಸ್ಪಷ್ಟನೆ