ಬೆಂಗಳೂರು: ಕೃಷಿ ಮತ್ತು ಅದಕ್ಕೆ ಸಂಬಂಧಿತ ವಲಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಬೆಂಗಳೂರು ಬಯೋ ಇನೋವೇಷನ್ ಕೇಂದ್ರದವರ ಆಶ್ರಯದಲ್ಲಿ “ಕೃಷಿ ನಾವೀನ್ಯತಾ ಕೇಂದ್ರ”ವನ್ನು 20 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಆಯವ್ಯಯ ಮಂಡನೆ ವೇಳೆ ಘೋಷಿಸಿದರು.
ಕರ್ನಾಟಕದ ಬೆಳವಣಿಗೆಗೆ ಪ್ರಮುಖವಾದ ವಿವಿಧ ವಲಯಗಳಲ್ಲಿರುವ ತಾಂತ್ರಿಕ ಸವಾಲುಗಳನ್ನು ಎದುರಿಸಲು (ಎಸ್ಟಿಪಿಐ) ಸಂಸ್ಥೆಯ ಸಹಭಾಗಿತ್ವದೊಂದಿಗೆ ದಕ್ಷತೆ ಹೆಚ್ಚಿಸುವುದರ ಕುರಿತು ಉತ್ಕೃಷ್ಟತಾ ಕೇಂದ್ರವನ್ನು 30 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಆಯವ್ಯಯ ಮಂಡನೆ ವೇಳೆ ಘೋಷಿಸಿದರು.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಂಶೋಧನೆ, ನಾವೀನ್ಯತೆ, ವಾಣಿಜ್ಯೀಕರಣ ಮತ್ತು ಪ್ರಾಯೋಗಿಕ ಅನುಷ್ಠಾನಗಳಿಗೆ ಆದ್ಯತೆ ಕೊಡುವ ದೃಷ್ಟಿಯಿಂದ ಹಾಗೂ 5-ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು (ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರಿಸರ್ಚ್ ಟ್ರಾನ್ಸ್ಲೇಷನ್ ಪಾರ್ಕ್)ಅನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್)ಯ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು. ಇದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60 ಕೋಟಿ ರೂ.ಗಳ ಇಡಿಗಂಟು ಅನುದಾನವನ್ನು ಒದಗಿಸಲಾಗುವುದು ಎಂದಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹಾಗೂ ವಿದೇಶಿ ಸರ್ಕಾರ ಮತ್ತು ಕಂಪನಿಗಳೊಂದಿಗೆ ಸಂಬಂಧಗಳನ್ನು ಬಲಪಡಿಸಲು ಕರ್ನಾಟಕ ತಂತ್ರಜ್ಞಾನ ಮಿಷನ್ಅನ್ನು ಏಳು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದಿದ್ದು, ಖಚಿತವಾದ ಉದ್ಯೋಗಾವಕಾಶಕ್ಕಾಗಿ ಕೌಶಲ್ಯ ತರಬೇತಿಗಳನ್ನು ನೀಡಲು ಮತ್ತು ಕೌಶಲ್ಯಗಳನ್ನು ಉನ್ನತೀಕರಿಸಲು ಮುಂದಿನ ಎರಡು ವರ್ಷಗಳಲ್ಲಿ 1000 ಪದವೀಧರರಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಟಾಲೆಂಟ್ ಅಕ್ಸಲರೇಷನ್ ಪ್ರೋಗ್ರಾಂ ಅನುಷ್ಠಾನಗೊಳಿಸಲಾಗುವುದು ಎಂದಿದ್ದಾರೆ.
ಕರ್ನಾಟಕವು ಭಾರತದ 60 ಬಿಲಿಯನ್ ಡಾಲರ್ ಜೈವಿಕ ಆರ್ಥಿಕತೆಗೆ ಸುಮಾರು ಶೇ. 34ರಷ್ಟು ಕೊಡುಗೆ ನೀಡುತ್ತಿದೆ. 2025ರ ವೇಳೆಗೆ ಅದು 100 ಬಿಲಿಯನ್ ಡಾಲರ್ಗೆ ತಲುಪುವ ನಿರೀಕ್ಷೆ ಇದೆ. 2025ರ ವೇಳೆಗೆ ಕರ್ನಾಟಕದ ಕೊಡುಗೆಯನ್ನು ಶೇ. 50ಕ್ಕೆ ಹೆಚ್ಚಿಸಲು ಸರ್ಕಾರವು ಆಳವಾದ ಅಧ್ಯಯನ ನಡೆಸಿ ಮಾರ್ಗಸೂಚಿ ಮತ್ತು ಕಾರ್ಯತಂತ್ರವನ್ನು ರೂಪಿಸಲಿದೆ ಎಂದಿದ್ದಾರೆ.
ನೈತಿಕತೆಗೆ ಒತ್ತು ನೀಡುವ ಘನ ಉದ್ದೇಶದೊಂದಿಗೆ ಹಿತಾಸಕ್ತರು ಒಟ್ಟುಗೂಡಿ ಸೂಕ್ತ ಪರ್ಯಾವರಣ ವ್ಯವಸ್ಥೆಯನ್ನು ಸೃಜಿಸಲು ವೇದಿಕೆಯನ್ನು ಕಲ್ಪಿಸುವ ಸಲುವಾಗಿ ದಾವೋಸ್ ವಿಶ್ವ ಆರ್ಥಿಕ ವೇದಿಕೆ ಸಹಭಾಗಿತ್ವದೊಂದಿಗೆ ಇಂಟರ್ನೆಟ್ ಆಫ್ ಎಥಿಕ್ ಥಿಂಕ್ಸ್ ವಿಷಯದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಸದರಿ ಕೇಂದ್ರಕ್ಕಾಗಿ ರಾಜ್ಯ ಸರ್ಕಾರವು ಐದು ವರ್ಷಗಳ ಅವಧಿಯಲ್ಲಿ 30 ಕೋಟಿ ರೂ.ಗಳ ಆರ್ಥಿಕ ಬೆಂಬಲವನ್ನು ಒದಗಿಸಲಿದೆ. 2020-21ನೇ ಸಾಲಿನಲ್ಲಿ 7.5 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು ಎಂದರು.