ಬೆಂಗಳೂರು : ನಗರದ ಜಯಮಹಲ್ ಹಾಗೂ ಬಳ್ಳಾರಿ ರಸ್ತೆ ಅಗಲೀಕರಣ ವಿಚಾರವಾಗಿ ಕೆಲ ತಾಂತ್ರಿಕ ಅಡಚಣೆಗಳಿವೆ. ಅವುಗಳನ್ನು ಸದ್ಯದಲ್ಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ರಸ್ತೆ ಅಗಲೀಕರಣ ಕೋರಿ ನಗರದ ಸಮರ್ಪಣಾ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ವಾದಿಸಿ, ಅರಮನೆ ಮೈದಾನ ಸರ್ಕಾರದ ಸ್ವಾಧೀನದಲ್ಲಿದೆ.
ಭೂಮಿಗೆ ಸರ್ಕಾರವೇ ಮಾಲೀಕ ಆಗಿರುವುದರಿಂದ ರಾಜಮನೆತನದವರಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡಲು ಸಾಧ್ಯವಿಲ್ಲ. ಮಾಲೀಕತ್ವ ಪ್ರಶ್ನಿಸಿ ರಾಜ ಮನೆತನ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದೆ. ಅರಮನೆ ಮೈದಾನ ಸ್ವಾಧೀನಕ್ಕೆ ಸುಪ್ರೀಂಕೋರ್ಟ್ ಯಾವುದೇ ತಡೆ ನೀಡಿಲ್ಲ ಎಂದರು.
ಅಲ್ಲದೆ, ಟಿಡಿಆರ್ ಯಾರಿಗೆ ನೀಡಬೇಕೆಂಬ ಬಗ್ಗೆ ಇನ್ನೂ ಗೊಂದಲವಿದೆ. ಹಾಗಾಗಿ, ಸುಪ್ರೀಂಕೋರ್ಟ್ನಿಂದ ಸ್ಪಷ್ಟನೆ ಕೋರಲು ಚಿಂತಿಸಲಾಗಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಹಿನ್ನೆಲೆ ನ್ಯಾಯಾಲಯ ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಿತು.
ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ, ಜಯಮಹಲ್ ರಸ್ತೆ (ಮೇಖ್ರಿ ವೃತ್ತದಿಂದ ದಂಡು ರೈಲು ನಿಲ್ದಾಣದವರೆಗೆ) ಮತ್ತು ಬಳ್ಳಾರಿ ರಸ್ತೆ (ಮೇಖ್ರಿ ವೃತ್ತದಿಂದ ಬಿಡಿಎ ಜಂಕ್ಷನ್ವರೆಗೆ) ಅಗಲೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಅಲ್ಲದೆ, ರಸ್ತೆ ಅಗಲೀಕರಣಕ್ಕೆ ಅರಮನೆಗೆ ಸೇರಿದ 16 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸುಪ್ರೀಂಕೋರ್ಟ್ 2014ರ ನ.21 ಮತ್ತು ಹೈಕೋರ್ಟ್ 2016ರ ಸೆ.7ರಂದು ಅನುಮತಿ ನೀಡಿದ್ದವು. ಆದರೆ, ಅದನ್ನು ನಿರ್ಲಕ್ಷಿಸಲಾಗಿದೆ.
ಮೈಸೂರು ರಾಜವಂಶಸ್ಥರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಒಂದೇ ಕಾರಣ ಮುಂದಿಟ್ಟುಕೊಂಡು ಸ್ಥಳೀಯ ಆಡಳಿತ ಟಿಡಿಆರ್ ನೀಡಲು ಮತ್ತು ರಸ್ತೆ ಅಗಲೀಕರಣ ಮಾಡದೆ ಅನಗತ್ಯ ಕಾಲಹರಣ ಮಾಡುತ್ತಿದೆ. ಸರ್ಕಾರ ಕೂಡ ಈ ವಿಚಾರದಲ್ಲಿ ಮೂಕಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.