ಹೊಸಕೋಟೆ : ನಕಲಿ ವೈದ್ಯನೊಬ್ಬ ಅಧಿಕಾರಿಗಳ ಕೈಗೆ ತಗಲಾಕಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಎಂವಿ ಬಡಾವಣೆಯಲ್ಲಿ ನಡೆದಿದೆ. ನಕಲಿ ವೈದ್ಯನ ಸಾಮ್ರಾಜ್ಯ ಕಂಡು ಖುದ್ದು ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ನೋಡೋಕೆ ಹೈ-ಫೈ ಆಗಿರುವ ಬಡಾವಣೆಯ ಸುಜಾತಾ ಕ್ಲಿನಿಕ್ನಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಬೆಡ್ ಲಭ್ಯವಿದೆ. ಇದಲ್ಲದೆ, ಕ್ಲಿನಿಕ್ನ ಮೂಲೆ ಮೂಲೆಯಲ್ಲಿ ಎತ್ತ ನೋಡಿದ್ರೂ ಅಲ್ಲಿ ಔಷಧಿಗಳು. ಆಸ್ಪತ್ರೆಯಲ್ಲಿರಬೇಕಾದ ಎಲ್ಲಾ ಸೌಕರ್ಯಗಳೂ ಈ ಕ್ಲಿನಿಕ್ನಲ್ಲಿದ್ದರೂ ಅವನೆಲ್ಲ ಬಳಸಬೇಕಾದ ವ್ಯಕ್ತಿಯೇ ನಕಲಿಯಾಗಿದ್ದಾನೆ.
ಕ್ಲಿನಿಕ್ನಲ್ಲಿ ಎಲ್ಲಾ ಔಷಧಿಗಳನ್ನು ಇಟ್ಟುಕೊಂಡು ಬಂದವರಿಗೆಲ್ಲ ಎಂಬಿಬಿಎಸ್ ಓದಿರುವ ವೈದ್ಯನಂತೆ ಫೋಸ್ ಕೊಟ್ಟಿಕೊಂಡು, ಬೇಕಾಬಿಟ್ಟಿ ಆ್ಯಂಟಿಬಯೋಟಿಕ್ ಕೊಟ್ಟು ಚಿಕಿತ್ಸೆ ಕೊಡ್ತಿದ್ದ ಮೋಹನ್ ಎಂಬ ಆಸಾಮಿಯ ನಕಲಿ ಬಂಡವಾಳ ಇದೀಗ ಪತ್ತೆಯಾಗಿದೆ.
ಜನರಿಗೆ ಆಯುಷ್ ಚಿಕಿತ್ಸೆ ಕೊಡ್ತೀನಿ ಅಂತಾ ಆರೋಗ್ಯ ಇಲಾಖೆಯಿಂದ ಸರ್ಟಿಫಿಕೇಟ್ ಪಡೆದು ಬಂದವರಿಗೆಲ್ಲ ಅಲೋಪಥಿ ಚಿಕಿತ್ಸೆ ಕೊಟ್ಟು ಕಳಿಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಹೊಸಕೋಟೆ ನಗರದ ರೋಗಿಗಳು ಈತ ಎಂಬಿಬಿಎಸ್ ಓದಿರೋ ವೈದ್ಯ.
ಎಲ್ಲಾ ಕಾಯಿಲೆಗಳಿಗೂ ಚೆನ್ನಾಗಿ ಚಿಕಿತ್ಸೆ ಕೊಡ್ತಾನೆ. ರೋಗ ಬೇಗ ವಾಸಿಯಾಗುತ್ತೆ ಅಂದುಕೊಂಡು ಚಿಕಿತ್ಸೆಗೆ ಹೋಗುತ್ತಿದ್ದ ರೋಗಿಗಳಿಗೆ ನಕಲಿ ವೈದ್ಯ ಮೋಹನ್ ಹೈ-ಡೋಸೇಜ್ ಔಷಧಿಗಳನ್ನ ನೀಡಿ ಕಳಿಸುತ್ತಿದ್ದ ಎಂದು ತಿಳಿದು ಬಂದಿದೆ.
ಹಾಗಾಗಿ, ಇಂದು ಹೊಸಕೋಟೆ ತಾಲೂಕಿನ ಟಿಹೆಚ್ಒ ಮಂಜುನಾಥ್ ನೇತೃತ್ವದ ತಂಡ ನಗರದ ಕ್ಲಿನಿಕ್ಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿವೆ ಅಂತಾ ಪರಿಶೀಲನೆ ಮಾಡುತ್ತಾ ಸುಜಾತ ಕ್ಲಿನಿಕ್ಗೂ ಎಂಟ್ರಿ ಕೊಟ್ಟಿದ್ದ ವೇಳೆಯಲ್ಲಿ ನಕಲಿ ಡಾಕ್ಟರ್ನ ಅಸಲಿಯತ್ತು ಗೊತ್ತಾಗಿದೆ.
ತಪಾಸಣೆ ನಡೆಸಿದ ವೇಳೆ ಕ್ಲಿನಿಕ್ನಲ್ಲಿ ಸಿಕ್ಕ ಸಿಕ್ಕ ಕಡೆ ಔಷಧಿ ಅಂಗಡಿಯ ರೀತಿ ಸಂಗ್ರಹಿಸಿಟ್ಟಿದ್ದ ಔಷಧಿಗಳು ಕಂಡು ಬಂದಿದೆ. ಸುಮಾರು 15 ಮೂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಮೌಲ್ಯದ ಆಂಟಿಬಯೋಟಿಕ್, ಸ್ಟೆರಾಯ್ಡ್ ಗ್ಲೂಕೋಸ್ ಬಾಟಲ್ಗಳು ಪತ್ತೆಯಾಗಿವೆ.
ಇದನ್ನು ಕಂಡು ಒಂದು ಕ್ಷಣ ಬೆಚ್ಚಿದ್ದ ತಂಡ ಮೋಹನ್ಗೆ ತನ್ನ ಸರ್ಟಿಫಿಕೇಟ್ ತೋರಿಸುವಂತೆ ಹೇಳಿದ್ದಾರೆ. ಈ ವೇಳೆ ನಕಲಿ ವೈದ್ಯ ತನ್ನ ಆಯುಷ್ ಸರ್ಟಿಫಿಕೇಟ್ ನೀಡಿದ್ದಾನೆ. ಆಗ ಈತನ ಅಸಲಿಯತ್ತು ಬೆಳಕಿಗೆ ಬಂದಿದೆ. ಸದ್ಯ ಔಷಧಿ ಸೇರಿದಂತೆ ಎಲ್ಲವನ್ನೂ ವಶಕ್ಕೆ ಪಡೆದ ಆರೋಗ್ಯಾಧಿಕಾರಿಗಳು ಕ್ಲಿನಿಕ್ಗೆ ಬೀಗ ಜಡಿದಿದ್ದಾರೆ.