ನೆಲಮಂಗಲ: ರಾಜ್ಯದೆಲ್ಲೆಡೆ ಇಂದು 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ನಾಡಹಬ್ಬದ ಹಿಂದಿನ ದಿನವೇ ಯುವಕರ ತಂಡವೊಂದು ಇತಿಹಾಸ ಪ್ರಸಿದ್ಧ ಭೈರವದುರ್ಗ ಬೆಟ್ಟದ ತುತ್ತ ತುದಿಯಲ್ಲಿ 65 ಅಡಿ ಉದ್ದದ ಕನ್ನಡ ಬಾವುಟ ಹಾರಿಸುವ ಮೂಲಕ ಕನ್ನಡ ಪ್ರೇಮ ಮೆರೆದಿದೆ.
ಇತಿಹಾಸ ಪ್ರಸಿದ್ಧ ಮಾಗಡಿ ಕೆಂಪೇಗೌಡರು ಆಳಿದ ಭೈರವದುರ್ಗ ಬೆಟ್ಟದ ಮೇಲೆ ಯುವಕರ ತಂಡವೊಂದು ನಿನ್ನೆಯೇ 65 ಅಡಿ ಉದ್ದದ ಬೃಹತ್ ಬಾವುಟ ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕುದೂರು ಹೋಬಳಿಯ ಭೈರವೇಶ್ವರ ನಗರದ ಯುವಕರು, ಪ್ರತಿ ವರ್ಷವು ಬೃಹತ್ ಗಾತ್ರದ ಬಾವುಟವನ್ನು ಹಿಡಿದು ಎತ್ತರದ ಬೆಟ್ಟ ಹತ್ತಿ, ಯಶಸ್ವಿಯಾಗಿ ಬಾವುಟ ಹಾರಿಸಿ ಬರುತ್ತಾರೆ.
ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಹೆಸರಿನಲ್ಲಿ ಅಕ್ಟೋಬರ್ 31ರಂದೇ ಈ ಬಾವುಟ ಹಾರಿಸಿದ್ದಾರೆ. ನಿನ್ನೆ ಸಂಜೆಯೇ ಬಾವುಟವನ್ನು ತೆಗೆದುಕೊಂಡು ಹೋಗಿ ಕನ್ನಡಾಂಬೆಯ ಘೋಷಣೆಗಳನ್ನು ಕೂಗಿ ವಿಶೇಷ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಕಳೆದ 14 ವರ್ಷಗಳಿಂದ ಭೈರವೇಶ್ವರ ನಗರದ ಯುವಕರು ಭೈರವದುರ್ಗ ಬೆಟ್ಟದ ಮೇಲೆ ಕನ್ನಡ ಬಾವುಟವನ್ನು ಹಾರಿಸುತ್ತಾ ಬಂದಿದ್ದು, ಕನ್ನಡ ರಾಜ್ಯೋತ್ಸವದ ಹಿಂದಿನ ದಿನವೇ ಕನ್ನಡದ ಹಬ್ಬವನ್ನು ಆಚರಿಸುವುದು ಇಲ್ಲಿನ ವೈಶಿಷ್ಟ್ಯತೆ. ಪ್ರತಿ ವರ್ಷ ಕನ್ನಡ ಬಾವುಟ ಅಳತೆಯನ್ನು ಹೆಚ್ಚಿಸುತ್ತಾ ಬಂದಿದ್ದಾರೆ. ಈ ವರ್ಷ 65 ಅಡಿ ಉದ್ದ ಕನ್ನಡ ಬಾವುಟ ಹಾರಿಸಿದ್ದಾರೆ, ಮುಂದೆ 101 ಅಡಿಗಳ ಉದ್ದದ ಕನ್ನಡ ಬಾವುಟ ಹಾರಿಸುವ ಕನಸು ಹೊಂದಿದ್ದಾರೆ.
ನಾಡಪ್ರಭು ರಾಜಧಾನಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ತಮ್ಮ ಸೇನೆಯಲ್ಲಿದ್ದ ಕುದುರೆಗಳನ್ನು ಇದೇ ಬೆಟ್ಟದಲ್ಲಿ ಪೋಷಣೆ ಮಾಡುತ್ತಿದ್ದರು ಎಂಬ ಪುರಾವೆಗಳಿರುವ ಪ್ರಸಿದ್ಧ ತಾಣವಾಗಿದೆ. ಸಾವನದುರ್ಗಾ, ಹುಲಿಯೂರು ದುರ್ಗಾ, ದೇವರಾಯನದುರ್ಗಾ ಸೇರಿದಂತೆ ಪ್ರಮುಖ ಏಳು ದುರ್ಗಾಗಳಲ್ಲಿ ಈ ಕುದೂರಿನ ಭೈರವದುರ್ಗಾ ಕೂಡ ಒಂದಾಗಿದೆ. ಹೀಗಾಗಿ ಯುವಕರ ತಂಡ ಕನ್ನಡಾಂಬೆಯ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಈ ಬೆಟ್ಟದಲ್ಲಿ ಕೆಂಪೇಗೌಡ ಕಾಲದಲ್ಲಿ ಕಟ್ಟಲಾದ ಕಲ್ಯಾಣಿ ಮತ್ತು ಕೋಟೆ ಸಹ ಶಿಥಿಲಗೊಂಡಿವೆ. ಬೆಟ್ಟ ಹತ್ತಲು ಮೆಟ್ಟಿಲು ಸಹ ಇಲ್ಲ. ಹಾಗಾಗಿ ಸರ್ಕಾರ ಭೈರವದುರ್ಗದ ಅಭಿವೃದ್ಧಿಗೆ ಅನುದಾನ ನೀಡಬೇಕೆನ್ನುವುದು ಸ್ಥಳೀಯರ ಒತ್ತಾಯವಾಗಿದೆ.