ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೊರೊನಾ ಲಾಕ್ಡೌನ್ನಿಂದಾಗಿ ಮಾರುಕಟ್ಟೆ ಇಲ್ಲದೆ ಮಾವು ಬೆಳೆಗಾರರು ನಷ್ಟಕ್ಕೆ ಸಿಲುಕಿದ್ದರು. ಈ ಸಮಯದಲ್ಲಿ ಮಾವು ಬೆಳೆಗಾರರ ಕೈ ಹಿಡಿದದ್ದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆರಂಭಿಸಿರುವ 'ಕರ್ ಸಿರಿ' ಆನ್ಲೈನ್ ಪೋರ್ಟಲ್. ಇದರ ಮೂಲಕ ರೈತರು ತಾವು ಬೆಳೆದ ತಾಜಾ ಮಾವಿನ ಹಣ್ಣುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.
ದೇವನಹಳ್ಳಿ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಮಾವು ಬೆಳಗಾರ ವಿ.ಸುಬ್ಬಣ್ಣ ತಮ್ಮ 40 ಎಕರೆ ಜಮೀನಿನ ಪೈಕಿ 12 ಎಕರೆ ಜಮೀನಿನಲ್ಲಿ ಮಲ್ಲಿಕಾ, ವೇನಿಶಾ, ಬಾದಾಮಿ, ನಷೇರಿ, ಮಲಗೋಬ ,ತೊತಾಪುರಿ, ಸಿಂಧೂ, ಐಶ್ವರ್ಯ ಸೇರಿದಂತೆ ಹಲವು ತಳಿಯ ಮಾವು ಬೆಳೆಯುತ್ತಾರೆ. ಮಾವಿನ ಬೆಳೆಯಿಂದ ಪ್ರತಿ ವರ್ಷ 12 ರಿಂದ 15 ಲಕ್ಷ ರೂ. ಆದಾಯ ಗಳಿಸುತ್ತಿದ್ದರು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ಈ ಬಾರಿ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಗಣನೀಯವಾಗಿ ಕುಸಿದಿತ್ತು.
ಈ ವೇಳೆ ಸುಬ್ಬಣ್ಣ ಅವರು 'ಕರ್ ಸಿರಿ' ಆನ್ಲೈನ್ ಪೋರ್ಟಲ್ ಮೂಲಕ ಗ್ರಾಹಕರಿಗೆ ಮಾವಿನ ಹಣ್ಣು ಪೂರೈಸಲು ಮುಂದಾದ್ರು. ಮಾವು ಬೆಳೆದ ರೈತ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಬ್ಯುಸಿನೆಸ್ ಟೂ ಬ್ಯುಸಿನಸ್ (B2B) ಯೋಜನೆಯಡಿ ಆನ್ಲೈನ್ ಮಾವು ವ್ಯಾಪಾರ ಜಾರಿ ಮಾಡಲಾಗಿದ್ದು, ಇದರ ಮೂಲಕ ಗ್ರಾಹಕರು ತಮ್ಮ ಮನೆಯಲ್ಲಿಯೇ ಕುಳಿತು ರೈತರಿಂದ ನೇರವಾಗಿ ಮಾವಿನ ಹಣ್ಣನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ. ಸುಬ್ಬಣ್ಣ ಅವರಿಗೂ ಸಹ ಆನ್ಲೈನ್ ಮಾರುಕಟ್ಟೆಯಿಂದ ಸಾಕಷ್ಟು ಅನುಕೂಲವಾಗಿದೆ.
ಗ್ರಾಹಕರಿಗೆ 3 ಕೆಜಿಯ ಬಾಕ್ಸ್ಗಳಲ್ಲಿ ಮಾವಿನ ಹಣ್ಣು ಮಾರಾಟ ಮಾಡಲಾಗುತ್ತೆ. ಕರ್ ಸಿರಿ ಬಾಕ್ಸ್ಗಳನ್ನು ನಿಗಮವೇ ಸಬ್ಸಿಡಿ ದರದಲ್ಲಿ ಬೆಳಗಾರರಿಗೆ ನೀಡಿದೆ. ಅಪಾರ್ಟ್ಮೆಂಟ್ ನಿವಾಸಿಗಳು, ಸರ್ಕಾರಿ ಕಚೇರಿಗಳು ಮತ್ತು ಸ್ನೇಹಿತರಿಂದ ಹೆಚ್ಚು ಬೇಡಿಕೆ ಬರುತ್ತಿದ್ದು, ಮಾರುಕಟ್ಟೆಯಲ್ಲಿನ ದರ ಮತ್ತು ಸಾಗಾಟದ ವೆಚ್ಚ ನೋಡಿಕೊಂಡು ಮಾವು ಮಾರಾಟ ಮಾಡುತ್ತಿದ್ದಾರೆ.
ಸುಬ್ಬಣ್ಣನವರು ಮರದಿಂದ ಹಣ್ಣನ್ನು ಕೀಳುವಾಗ ನೆಲಕ್ಕೆ ಬಿಳದಂತೆ ಎಚ್ಚರಿಕೆ ವಹಿಸುತ್ತಾರೆ. ಇದರಿಂದ ಮಾಗಿದ ಹಣ್ಣುಗಳು ಕೊಳೆಯುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಡ್ಯಾಮೇಜ್ ಆದ ಹಣ್ಣುಗಳನ್ನೇ ಮಾಗಿಸುವುದರಿಂದ ಕೊಳೆತ ಹಣ್ಣುಗಳು ಗ್ರಾಹಕನ ಬುಟ್ಟಿ ಸೇರುತ್ತೆ. ಹಣ್ಣು ಮಾಗಿಸಲು ಆರೋಗ್ಯಕ್ಕೆ ಹಾನಿಕಾರಕವಾದ ಕಾರ್ಬೈಡ್ ರಾಸಾಯನಿಕ ಬಳಸದೆ, ನೈಸರ್ಗಿಕವಾದ ಇಥೈಲಿನ್ ಅನಿಲ ಬಳಸುತ್ತಾರೆ. ಆನ್ಲೈನ್ ಮೂಲಕ ಹಣ್ಣುಗಳನ್ನು ಮಾರಾಟ ಮಾಡುವುದರ ಜೊತೆಗೆ ಸುಬ್ಬಣ್ಣ ಜ್ಯೂಸ್ ತಯಾರಿಕೆಗಾಗಿ ಮದರ್ ಡೈರಿಗೆ ಹಣ್ಣುಗಳನ್ನು ಕೊಡುತ್ತಾರೆ. ಜೊತೆಗೆ ಹಾಪ್ಕಾಮ್ಸ್ಗೂ ಮಾರಾಟ ಮಾಡುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಕಂಗಾಲಾಗಿದ್ದ ಸುಬ್ಬಣ್ಣ, ಇದೀಗ ಆನ್ಲೈನ್ ಮಾರುಕಟ್ಟೆ ಮೂಲಕ ಲಾಭ ಗಳಿಸುತ್ತಿದ್ದಾರೆ.
ಇದನ್ನೂ ಓದಿ: ಡಿಕೆಶಿ ಬೆನ್ನಲ್ಲೇ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್: ಮುಂದಿನ ವಾರ ದಿಲ್ಲಿಗೆ ಪ್ರಯಾಣ ಸಾಧ್ಯತೆ