ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, 45 ಲಕ್ಷದ 11 ಸಾವಿರದ 606 ರೂ. ಹಣ ಸಂಗ್ರಹವಾಗಿದೆ.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದಾಗಿ ದೇವಾಲಯದ ಆದಾಯ ಸಹ ಕುಸಿದಿತ್ತು. ಆದರೆ, ಈ ತಿಂಗಳಿನಿಂದ ಹುಂಡಿ ಹಣ ಸಂಗ್ರಹ ಏರಿಕೆಯಾಗಿದ್ದು, 45,11,606 ರೂ. ಹಣ ಸಂಗ್ರಹವಾಗಿದೆ. ಇದರೊಂದಿಗೆ 1 ಕೆ.ಜಿ 100 ಗ್ರಾಂ ಬೆಳ್ಳಿ, 7 ಗ್ರಾಂ ಚಿನ್ನ ಹುಂಡಿಯಲ್ಲಿ ಸಿಕ್ಕಿದೆ.
ಇನ್ನು, ಹುಂಡಿಯಲ್ಲಿ ಆಸ್ಟ್ರೇಲಿಯಾ, ಮಲೇಶಿಯಾ, ಚೈನಾ, ಸಿಂಗಾಪುರ್ ದೇಶಗಳ ನೋಟುಗಳು ಸಿಕ್ಕಿದ್ದು, ಇದರೊಂದಿಗೆ ನಿಷೇಧಿತ 500 ಹಾಗೂ 1,000 ರೂ. ಮುಖಬೆಲೆಯ 2 ನೋಟುಗಳು ಸಿಕ್ಕಿವೆ.
ಎಣಿಕೆ ಕಾರ್ಯದಲ್ಲಿ ಮುಜರಾಯಿ ತಹಶೀಲ್ದಾರ್ ಜಿ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಗುರುರಾಜಶರ್ಮ, ಭಕ್ತಾದಿಗಳು, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.