ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿರುವ ವಿಮಾನ ನಿಲ್ದಾಣ. ಆದರೆ, ವಿಮಾನ ನಿಲ್ದಾಣ ಆಡಳಿತ ಮಂಡಳಿ ವಿರುದ್ದ ಕೆಲ ಕಾರು ಚಾಲಕರು ಇದೀಗ ಸಿಡಿದೆದ್ದಿದ್ದಾರೆ. ಏರ್ಪೋರ್ಟ್ನಲ್ಲಿ ಕೆಎಸ್ಡಿಸಿ ಕಾರು ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಂದಹಾಗೆ ದೇಶ ವಿದೇಶದಿಂದ ಪ್ರತಿ ನಿತ್ಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಕ್ಷಾಂತರ ಪ್ರಯಾಣಿಕರು ಆಗಮಿಸುತ್ತಾರೆ.
ಹಾಗಾಗಿ ಇವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ಆಡಳಿತ ಮಂಡಳಿ ರಾಜ್ಯ ಸರಕಾರದ ಅಧೀನದಲ್ಲಿ ಇರುವ ಕೆಎಸ್ಡಿಸಿ ಕಾರುಗಳನ್ನು ಬುಕ್ ಮಾಡಿಕೊಂಡಿದೆ. ಆದರೆ, ಕೊರೋನಾ ಬರುವ ಮೊದಲು ಏರ್ಪೋರ್ಟ್ ಅರೈವಲ್ ಬಳಿ 150 ಕಾರುಗಳು ನಿಂತು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅವಕಾಶವಿತ್ತು. ಆದರೆ, ಈಗ ಬರೀ 5 ರಿಂದ 30 ಕಾರುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಈ ಕಾರುಗಳಿಗೆ ಪ್ರಯಾಣಿಕರು ಬಂದು ಹೋಗುವವರೆಗೂ ಮತ್ತೆ ಯಾವುದೇ ಕಾರುಗಳಿಗೆ ಅವಕಾಶ ಇಲ್ಲ. ಏರ್ಪೋರ್ಟ್ನ ಭದ್ರತೆಯ ನೆಪ ಹೇಳಿ ಹೆಚ್ಚು ಕಾರುಗಳು ಪಾರ್ಕಿಂಗ್ ಮಾಡಲು ಏರ್ಪೋರ್ಟ್ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹಾಗಾಗಿ ದಿನವೆಲ್ಲಾ ಕಾದರೂ ಒಂದೇ ಒಂದು ಬಾರಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಆಗುತ್ತಿಲ್ಲ ಎಂದು ಏರ್ಪೋಟ್ ಚಾಲಕರ ಸಂಘದ ಕಾರ್ಯದರ್ಶಿ ಧರ್ಮೇಂದ್ರ ಅಸಮಾಧಾನ ತೋಡಿಕೊಂಡಿದ್ದಾರೆ.
ಇನ್ನೂ ಏರ್ಪೋರ್ಟ್ಗೆ ಬರುವ ಪ್ರಯಾಣಿಕರನ್ನು ಏರ್ಪೋರ್ಟ್ ಸಿಬ್ಬಂದಿ ಖಾಸಗಿ ಕಂಪನಿಗಳಾದ ಓಲಾ ಮತ್ತು ಊಬರ್ಗೆ ಹೋಗುವಂತೆ ಸೂಚನೆ ನೀಡುತ್ತಿದ್ದರಂತೆ. ಒಂದು ಬಾರಿ ಏರ್ಪೋರ್ಟ್ ನಿಂದ ಬೆಂಗಳೂರಿಗೆ ಹೋಗಲು ಖಾಸಗಿ ಕಂಪನಿಯ ಟ್ಯಾಕ್ಸಿಗಳಲ್ಲಿ 2 ಸಾವಿರ ರೂ ದರ ವಿಧಿಸುತ್ತಾರಂತೆ. ಆದರೆ, ಡ್ರೈವರ್ಗೆ ಸಿಗುವುದು ಬರೀ 800 ರಿಂದ 1 ಸಾವಿರ ಅಷ್ಟೇ. ಉಳಿದಿದ್ದೆಲ್ಲಾ ಹಣ ಖಾಸಗಿ ಕಂಪನಿ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಕೆಎಸ್ಡಿಸಿ ಕಾರಿನಲ್ಲಿ ಈಗಾಗಲೇ ಮೀಟರ್ ಅಳವಡಿಕೆ ಇರುವುದರಿಂದ ಚಾರ್ಜ್ ಕಡಿಮೆ ಇದೆ. ಹೀಗಾಗಿ ಇದರಲ್ಲಿ ಬಂದ ಹಣ ಹೆಚ್ಚು ಪಾಲು ಚಾಲಕರಿಗೆ ಸೇರುತ್ತದೆ. ಇದರಿಂದ ಏರ್ಪೋರ್ಟ್ ಅಧಿಕಾರಿಗಳಿಗೆ ಯಾವುದೇ ಲಾಭವಿಲ್ಲ ಎಂದು ಏರ್ಪೋರ್ಟ್ ಅಧಿಕಾರಿಗಳು ಪ್ರಯಾಣಿಕರನ್ನು ಖಾಸಗಿ ಕಂಪನಿ ಕಾರುಗಳಿಗೆ ಕಳುಹಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದರಿಂದ ವಾರಗಟ್ಟಲೇ ಕುಟುಂಬವನ್ನು ಬಿಟ್ಟು ದುಡಿಮೆ ಮಾಡಲು ರಾಜ್ಯದ ವಿವಿಧ ಮೂಲೆಗಳಿಂದ ಬಂದ ಚಾಲಕರಿಗೆ ದಿಕ್ಕುದೋಚದಂತೆ ಆಗಿದೆ. 24 ಗಂಟೆಯಲ್ಲಿ 2 ರಿಂದ 3 ಬಾಡಿಗೆ ಸಿಕ್ಕರೂ ಹೆಚ್ಚು. ಹಾಗಾಗಿ ಕಾರು ಚಾಲಕರು ಏರ್ಪೋರ್ಟ್ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳುವುದು ಏನು?: ಏರ್ಪೋರ್ಟ್ನಲ್ಲಿ ಯಾವುದೇ ಟ್ಯಾಕ್ಸಿಗಳಿಗೆ ತಾರತಮ್ಯ ಮಾಡುತ್ತಿಲ್ಲ. ಜೊತೆಗೆ ಕೆಎಸ್ಟಿಡಿಸಿಯನ್ನು ನಿರ್ಲಕ್ಷ ಮಾಡುವ ಕೆಲಸವೂ ಮಾಡಿಲ್ಲ. ಅರೈವಲ್ ಮುಂಭಾಗ ಭದ್ರತಾ ದೃಷ್ಟಿಯಿಂದ ಹಂತ ಹಂತವಾಗಿ ಟ್ಯಾಕ್ಸಿಗಳು ನಿಲ್ಲಿಸಿಕೊಳ್ಳಲು ಜಾಗ ಕೊಡಲಾಗಿದೆ. ಪ್ರಯಾಣಿಕರು ತಮ್ಮ ತಮ್ಮ ಆಯ್ಕೆಗೆ ಅನುಸಾರ ಟ್ಯಾಕ್ಸಿಗಳನ್ನ ಬುಕ್ ಮಾಡಿಕೊಳ್ಳುತ್ತಾರೆ. ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಪಾರ್ಕಿಂಗ್ ಲಾಟ್ನ ಮ್ಯಾನೇಜರ್ ಒಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಜನವರಿ 15ರಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಕಾರ್ಯಾರಂಭ