ದೊಡ್ಡಬಳ್ಳಾಪುರ : ಬೋರ್ವೆಲ್ನ ಕೇಬಲ್ ಕಳ್ಳತನ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇನ್ಶೆಟ್ಟಿ ಗ್ರಾಮದಲ್ಲಿ ನಡೆದಿದೆ. ಬೋರ್ವೆಲ್ ರಿಪೇರಿಯಾಗದೆ ಮೂರು ಗ್ರಾಮಗಳ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ವಾಟರ್ ಮ್ಯಾನ್ನ ನಿರ್ಲಕ್ಷ್ಯತೆಯೇ ಕಳ್ಳತನಕ್ಕೆ ಕಾರಣವೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಬೋರ್ವೆಲ್ನ ಪಂಪ್ ಸುಟ್ಟು ಹೋಗಿದೆ. ರಿಪೇರಿಗಾಗಿ ಪಂಪ್ ಬಿಚ್ಚಲಾಗಿತ್ತು. ಕೇಬಲ್ ಮತ್ತು ಪೈಪ್ಗಳನ್ನ ಬೋರ್ವೆಲ್ನಲ್ಲಿಯೇ ಬಿಡಲಾಗಿತ್ತು. ಇದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನ ವಾಟರ್ಮ್ಯಾನ್ ತಿಪ್ಪಯ್ಯನಿಗೆ ವಹಿಸಲಾಗಿತ್ತು. ಆದರೆ, ವಾಟರ್ಮ್ಯಾನ್ ಮನೆಗೆ ಬಂದಿದ್ದ ಕಾರಣ ಇದೇ ಸಮಯವನ್ನ ಕಾದಿದ್ದ ಕಳ್ಳರು, ಸುಮಾರು 1 ಲಕ್ಷ ರೂ. ಮೌಲ್ಯದ ಸಾವಿರ ಅಡಿಯ ಕೇಬಲ್ ಕದ್ದು ಪರಾರಿಯಾಗಿದ್ದಾರೆ.
ಬೋರ್ವೆಲ್ ರಿಪೇರಿಯಾಗದೆ, ಕಳೆದ ಐದು ದಿನಗಳಿಂದ ಬಂಡಿಗಾನಹಳ್ಳಿ, ಬೆಣಚಿಹಟ್ಟಿ, ಬಂಡೆಗ್ರಾಮದ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿಲ್ಲದ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಸಹ ಪಿಡಿಒ ತ್ರಿವೇಣಿ ಮತ್ತು ಕಾರ್ಯದರ್ಶಿ ತಿಪ್ಪಣ್ಣ ನಿರ್ಲಕ್ಷ್ಯತೆ ತೋರಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಗ್ರಾಪಂ ಸದಸ್ಯ ಗಂಗಹನುಮಯ್ಯ ನೇತೃತ್ವದಲ್ಲಿ ಇತರೆಲ್ಲ ಸದಸ್ಯರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ತವ್ಯಲೋಪ : ನಿರಾಶ್ರಿತರ ಪರಿಹಾರ ಕೇಂದ್ರದ ಪ್ರಭಾರ ಅಧೀಕ್ಷಕಿ ಅಮಾನತು