ಬೆಂಗಳೂರು: ಅದು ಸರ್ಕಾರಿ ಕೆರೆ. ಗ್ರಾಮ ಪಂಚಾಯಿತಿಗೆ ಸೇರಿದ ಜಾಗ. ಆದ್ರೆ ಇಲ್ಲೊಬ್ಬ ವ್ಯಕ್ತಿ ಸರ್ಕಾರಿ ಕೆರೆಯನ್ನು ಥೇಟ್ ತನ್ನ ಸ್ವಂತ ಜಾಗದಂತೆ ವಿವಿಧ ಕೆಲಸಗಳಿಗೆ ಬಳಸಿಕೊಂಡು ಅಕ್ರಮವಾಗಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ..
ಕೆರೆಯಲ್ಲಿ ಆಕ್ರಮವಾಗಿ ಮಣ್ಣು ತೆಗೆದು ಕೆರೆ ಜಾಗದಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸದ ರಾಶಿ ಹಾಕಿ, ಅಲ್ಲದೇ ಕೆರೆ ನೀರನ್ನು ಜನರು ಬಳಕೆ ಮಾಡಲು ಬಿಡುತ್ತಿಲ್ಲವಂತೆ. ಈ ಎಲ್ಲ ಅವ್ಯವಸ್ಥೆಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬ್ಯಾಲಹಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ ಎನ್ನಲಾಗಿದೆ. ಕೆರೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಇಂತಹ ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರು ನೀಡಿದರೆ, ಅಧಿಕಾರಿಗಳ ಸಮ್ಮುಖದಲ್ಲೇ ಗ್ರಾಮಸ್ಥರಿಗೆ ಧಮ್ಕಿ ಹಾಕಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು ಸಮೀಪ ಇರುವ ಈ ಗ್ರಾಮದಲ್ಲಿ ಜಮೀನಿಗೆ ಚಿನ್ನದಂತಹ ಬೆಲೆ ಇದೆ. ಆದ್ರಿಂದ ಕೆರೆ, ಸರ್ಕಾರಿ ಜಾಗಗಳು ಭೂಗಳ್ಳರ ಪಾಲಾಗುತ್ತಿದೆ. ಕೆರೆಯಲ್ಲಿನ ಮಣ್ಣನ್ನು ತೆಗೆದು ಕೆರೆ ಜಾಗ ಒತ್ತವರಿ ಮಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ನಕಾಶೆಯಲ್ಲಿರುವ ಕೆರೆಯ ಜಾಗವನ್ನು ಕಬಳಿಸಲಾಗಿದೆ. ಅಲ್ಲದೇ ಇದೇ ಕೆರೆಗೆ ನೀರನ್ನು ಅವರೇ ಬಿಟ್ಟು ನೀರನ್ನು ಸ್ಥಳೀಯ ಜನರು ಬಳಸದಂತೆ ಮಾಡಿದ್ದಾರೆ. ದನಕರುಗಳಿಗೆ ನೀರು ಕುಡಿಸಲು ಬಂದಾಗ ಜನರಿಗೆ ಅವಾಜ್ ಹಾಕಿದ ಘಟನೆಗಳು ನಡೆದಿವೆ. ಇದರಿಂದ ಜನರು ಪಂಚಾಯತಿ ಮತ್ತು ಊರಿನ ಮುಖಂಡರ ಗಮನಕ್ಕೆ ತಂದರೆ ಅವರು ಕೂಡ ಅಕ್ರಮದಲ್ಲಿ ಶಾಮೀಲಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.