ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ನಗರದ ಹೊರಭಾಗದ ಚಿಕ್ಕಬಳ್ಳಾಪುರ ರಸ್ತೆ ನಂದಿಮೋರಿ ಬಳಿಯ ಖಾಲಿ ಸೈಟ್ನ ಕಸದ ರಾಶಿಯಲ್ಲಿ ಭಿಕ್ಷುಕನೊಬ್ಬನ ಮೃತದೇಹ ಸತ್ತು ಮೂರು ದಿನಗಳ ನಂತರ ಪತ್ತೆಯಾಗಿದೆ. ಅರ್ಧ ಮೃತದೇಹನ್ನ ಬೀದಿ ನಾಯಿಗಳು ತಿಂದಿವೆ. ಭಿಕ್ಷುಕ ಸಾವನ್ನಪ್ಪಿ ಮೂರು ದಿನಗಳಾಗಿದ್ದು, ವಾಸನೆ ಬಂದ ನಂತರ ಜನರು ನೋಡಿದ್ದಾರೆ. ಸುಮಾರು 65 ವರ್ಷದ ವೃದ್ಧನ ಶವವಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಸುತ್ತಮುತ್ತಲಿನ ಪ್ರದೇಶದಲ್ಲಿ ಚಿಂದಿ ಆಯ್ದು ಮತ್ತು ಭಿಕ್ಷಾಟನೆ ಮಾಡಿಕೊಂಡಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ದಿಕ್ಕುದೆಸೆ ಇಲ್ಲದ ಈತ ಅನ್ನ ಆಹಾರ ಸಿಗದೆ ನಿತ್ರಾಣಗೊಂಡು ಕಸದ ರಾಶಿಯಲ್ಲಿ ಪ್ರಾಣ ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಮೃತಪಟ್ಟ ಮೂರನೇ ದಿನಕ್ಕೆ ವಾಸನೆ ಬಂದಾಗ ಪಕ್ಕದಲ್ಲಿರುವ ಗ್ಯಾರೇಜ್ ನವರು ಬಂದು ನೋಡಿದಾಗ ಶವ ಪತ್ತೆಯಾಗಿದೆ. ಅದಾಗಲೇ ಬೀದಿನಾಯಿಗಳು ಅರ್ಧದೇಹವನ್ನ ತಿಂದಿದ್ದವು. ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.