ಹೊಸಕೋಟೆ : ಗ್ರಾಮದಲ್ಲಿ ನಡೆದ ಸಾಮಾನ್ಯ ಸಭೆಗೆ ತನ್ನನ್ನು ಕರೆಯಲಿಲ್ಲ ಎಂದು ಆಕ್ರೋಶಗೊಂಡ ಮಾಜಿ ಗ್ರಾಪಂ ಸದಸ್ಯ ಮತ್ತು ಆತನ ಬೆಂಬಲಿಗರು ಲಾಂಗ್ನಿಂದ ನೀರುಗಂಟಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಬೈಲನರಸಾಪುರದಲ್ಲಿ ನಡೆದಿದೆ.
ಗ್ರಾಮಸಭೆ ನಡೆಯುವ ಸಂದರ್ಭದಲ್ಲಿ ಲಾಂಗ್, ಮಚ್ಚುಗಳನ್ನು ಝಳಪಿಸಲಾಗಿದೆ. ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಸಭೆಗೆ ಕರೆಯಲಿಲ್ಲ ಎಂದು ರೊಚ್ಚಿಗೆದ್ದ ಕೆಲವರು ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಗ್ರಾಮದ ಅಬ್ರಾಹರ್ ಖಾನ್, ಸರ್ದಾರ್ ಖಾನ್, ಮಸೂದ್ ಖಾನ್, ಸಾಧಿಕ್ ಮತ್ತು ಅಗ್ವರ್ ಖಾನ್ ಎಂಬುವರು ವಾಟರ್ಮ್ಯಾನ್ ಫಾಜಿಲ್ ಅಹ್ಮದ್ ಮತ್ತು ಫಿರ್ದೂಸ್ ಅಹ್ಮದ್ ಮೇಲೆ ಹಲ್ಲೆ ನಡೆಸಿದ್ದಾರೆ.
ಬೈಲನರಸಾಪುರ ಗ್ರಾಪಂ ಸದಸ್ಯರುಗಳು ಯಾವಾಗ ಸಭೆ ಮಾಡಬೇಕು?, ಯಾವ ಕೆಲಸಗಳನ್ನು ಮಾಡಬೇಕು ಎಂದು ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ನಮ್ಮನ್ನು ಕರೆಯದೆ ಮೀಟಿಂಗ್ ಮಾಡುತ್ತಿದ್ದೀರಾ? ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಪಿಡಿಒ ಗಲಾಟೆ ಮಾಡುವವರನ್ನು ಹೊರಗೆ ಕಳುಹಿಸಿದ್ದಾರೆ.
ಬಳಿಕ ನೀರಿನ ಬಾಟಲ್ ತರಲೆಂದು ವಾಟರ್ ಮ್ಯಾನ್ ಪಂಚಾಯತ್ ಕಚೇರಿಯಿಂದ ಹೊರಗೆ ಹೋದಾಗ ಕೆಲವರು ಲಾಂಗ್ ಹಿಡಿದು ಬಂದಿದ್ದಾರೆ. ವಾಟರ್ಮ್ಯಾನ್ ಫಾಜಿಲ್ ಅಹ್ಮದ್ ಅವರ ತಲೆಗೆ ಲಾಂಗ್ನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೈ ಅಡ್ಡ ತಂದ ನೀರುಗಂಟಿ ಫಾಜಿಲ್ ಕೈಗೆ ಗಾಯವಾಗಿದೆ.
ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ ಫಾಜಿಲ್ ಅಣ್ಣ ಫಿರ್ದೂಸ್ ಅಹ್ಮದ್ ಮೇಲೂ ಹಲ್ಲೆ ಮಾಡಲಾಗಿದೆ. ನಂತರ ಇಬ್ಬರೂ ಗಾಯಾಳುಗಳು ಪಂಚಾಯತ್ ಕಚೇರಿಗೆ ತೆರಳಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಇದನ್ನೂ ಓದಿ: ರಾಮ ಮಂದಿರಕ್ಕಾಗಿ ರಾಜಸ್ಥಾನಿ ವಿಷ್ಣು ಸಮಾಜದಿಂದ ದೇಣಿಗೆ ಸಂಗ್ರಹಿಸಿದ ಸಚಿವ ಕೆ ಎಸ್ ಈಶ್ವರಪ್ಪ
ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಲಾಂಗ್ ಹಿಡಿದು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಲ್ಲೆ ನಡೆದ ಬಗ್ಗೆ ಫಾಜಿಲ್ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಾಗಿದ್ದು, ನಂದಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.