ನೆಲಮಂಗಲ: ಎಂದಿನಂತೆ ಬೆಳಗ್ಗೆ ಬಹಿರ್ದೆಸೆಗೆಂದು ಹೊರಹೋದ ಮಹಿಳೆವೋರ್ವಳು ನಾಪತ್ತೆಯಾಗಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತಡಸೀಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.
25 ವರ್ಷದ ಮಹಿಳೆ ಬಹಿರ್ದೆಸೆಗೆಂದು ಹೊರ ಹೋದವಳು ನಾಪತ್ತೆಯಾಗಿದ್ದು, ಮಹಿಳೆ ಪತಿ ಮಂಜುನಾಥ್ ಠಾಣೆ ಮೆಟ್ಟಿಲೇರಿದ್ದಾರೆ. ತಡಸೀಘಟ್ಟದ ಸಂಗಿತಮ್ಮನವರ ತೋಟದ ಮನೆಯಲ್ಲಿ ಇವರು ವಾಸವಾಗಿದ್ದರು. ಮರ ಕಡಿಯುವ ಕೆಲಸ ಮಾಡುತ್ತಿದ್ದ ದಂಪತಿ ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಜಮನಾಳ ಗ್ರಾಮದವರು. ಕಳೆದ 15 ದಿನಗಳ ಹಿಂದೆ ತಡಸೀಘಟ್ಟದ ಸಂಗಿತಮ್ಮನವರ ತೋಟದ ಮನೆಯಲ್ಲಿ ವಾಸವಾಗಿದ್ದರು.
ಘಟನೆ ಹಿನ್ನೆಲೆ
ಮೇ 22ರ ಬೆಳಗ್ಗೆ ಪ್ರತಿನಿತ್ಯದ ಕರ್ಮದಂತೆ ಮಹಿಳೆ ಶೌಚಕ್ಕೆ ಹೋಗುವುದಾಗಿ ತನ್ನ ಗಂಡನಿಗೆ ಹೇಳಿ ತೋಟದ ಮನೆಯಿಂದ ಹೊರ ಹೋಗಿದ್ದಾಳೆ. ಹೀಗೇ ಮನೆಯಿಂದ ಹೊರ ಹೋದ ಮಹಿಳೆ ಕಣ್ಮರೆಯಾಗಿದ್ದಾಳೆ. ಮಹಿಳೆಯ ಗಂಡ, ಸಂಬಂಧಿಕರು-ಪರಿಚಯಸ್ಥರ ಬಳಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಕುರಿತು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.